ಲಾರಿ ಅಡ್ಡಗಟ್ಟಿ ಕಬ್ಬು ಸವಿದ ಕಾಡಾನೆ!
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.19- ಕಾಡಾನೆಯೊಂದು ಆಹಾರ ಅರಸಿ ರಸ್ತೆಗಿಳಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ಚಾಮರಾಜನಗರ ಗಡಿಭಾಗ ತಮಿಳುನಾಡಿನ ತಾಳವಾಡಿ ಸಮೀಪ ಮಂಗಳವಾರ ಸಾಯಂಕಾಲ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್‍ಆಗಿದೆ.
ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ, ಕಬ್ಬಿನ ಲಾರಿ ಅಡ್ಡಗಟ್ಟಿತು. ಆನೆ ಕಂಡು ಹೌಹಾರಿರುವ ಸವಾರರು, ರಸ್ತೆಯ ಎರಡೂ ಬದಿಗಳಲ್ಲೂ ವಾಹನ ನಿಲ್ಲಿಸಿ, ಆನೆ ಪಕ್ಕಕ್ಕೆ ಸರಿಯುವತನಕ ಕಾದಿದ್ದಾರೆ. ಇದರಿಂದ ಅರ್ಧ ತಾಸಿಗಿಂತಲೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಕಬ್ಬಿನ ಲಾರಿಗೆ ಟಾರ್ಪಲ್ ಸುತ್ತಿದ್ದರೂಕೂಡ ಬಿಡದ ಕಾಡಾನೆ, ಟಾರ್ಪಲ್‍ಕಿತ್ತು ಬಿಸಾಡಿ ಕಬ್ಬಿನ ಜಲ್ಲೆಗಳನ್ನು ಸವಿದಿದೆ. ಆನೆ ಸಮೀಪವೇ ಇದ್ದರೂ ಬೈಕ್ ಸವಾರರು ಹುಚ್ಚಾಟ ಮೆರೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತುಂಬಿಕೊಂಡು ಹೋಗುವ ಲಾರಿಗಳೇ ಕಾಡಾನೆಯ ಟಾರ್ಗೆಟ್ ಆಗಿವೆ. ಆಗಾಗ್ಗೆ ರಸ್ತೆಗಿಳಿದು ಕಬ್ಬು ವಸೂಲಿ ಮಾಡುತ್ತಿವೆ. ಆನೆಗೆ ಊಟವಾದರೆ, ವಾಹನ ಸವಾರರಿಗೆ ಪ್ರಾಣ ಸಂಕಟ ಎದುರಾಗಿದೆ.