ಊಟ ವಿತರಿಸದ ಅಂಗನವಾಡಿ ಕಾರ್ಯಕರ್ತೆ ವಜಾಗೆ ಕ್ರಮ
ಕೋಲಾರ,ಸೆ,೧೯- ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಕ್ಕಿಪಿಕ್ಕಿ ಅಂಗನವಾಡಿ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿರವರು ಸೆ.೧೧ ರಂದು ಅಧಿಕೃತ ಪ್ರವಾಸದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಅಂಗನವಾಡಿಯಿಂದ “ಸಮಗ್ರ ಶಿಶು ಅಭಿವೃದ್ಧಿ ಯೋಜನೆ” ಯಡಿಯಲ್ಲಿ ಗರ್ಭೀಣಿ ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಮೊಟ್ಟೆ, ಬಿಸಿಊಟ ವಿತರಿಸದೇ ಇರುವುದು ಕಂಡು ಬಂದಿರುತ್ತದೆ. ಮೊಟ್ಟೆ ವಿತರಣೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯಾದ ಆಲುವೇಲಮ್ಮ ರವರನ್ನು ಅಧ್ಯಕ್ಷರು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿಮಹಿಳೆಯರು ಪೌಷ್ಟಿಕಾಂಶದ ಪದಾರ್ಥಗಳನ್ನು ವಿತರಿಸದೇ ಇರುವುದನ್ನು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದಿರುತ್ತಾರೆ.
ಈ ಕುರಿತು ಅಧ್ಯಕ್ಷರು ಮುಖ್ಯಮಂತ್ರಿಗಳ ಕಛೇರಿಗೆ ತಮ್ಮ ವರದಿಯನ್ನು ಸಲ್ಲಿಸಿದ್ದು, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ರವರು ಸದರಿ ವಿಷಯದ ವಾಸ್ತವಾಂಶದ ಬಗ್ಗೆ ಆದ್ಯತೆಯ ಮೇರೆಗೆ ಪರಿಶೀಲಿಸಿ ತಕ್ಷಣವೇ ಕರ್ತವ್ಯ ಲೋಪವೆಸಗಿರುವ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಂಡು, ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಸೆ. ೧೨ ರಂದು ಶ್ರೀನಿವಾಸಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವರು ಭೇಟಿ ನೀಡಿ ಗರ್ಭಿಣಿ/ಬಾಣಂತಿಯರ ಸಭೆಯನ್ನು ನಡೆಸಿ, ಅಂಗನವಾಡಿ ಕಾರ್ಯಕರ್ತೆಗೆ ಹಾಗೂ ವೃತ್ತದ ಮೇಲ್ವಿಚಾರಕಿರವರಿಗೂ ಸಹ ನೋಟೀಸ್ ಅನ್ನು ಜಾರಿ ಮಾಡಲಾಗಿದ್ದು, ಕೋಳಿ ಮೊಟ್ಟೆಯನ್ನು ಸಮರ್ಪಕವಾಗಿ ವಿತರಣೆ ಮಾಡಲು ಸೂಚಿಸಲಾಗಿರುತ್ತದೆ.
ಸೆ.೧೭ ರಂದು ಜಿಲ್ಲಾ ನಿರೂಪಣಾಧಿಕಾರಿಗಳು ಸದರಿ ಕೇಂದ್ರಕ್ಕೆ ವೃತ್ತದ ಮೇಲ್ವಿಚಾರಕಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಂದಿಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಲಾಗಿ ಕಳೆದ ೨ ತಿಂಗಳಿಂದ ಕೋಳಿಮೊಟ್ಟೆಯನ್ನು ನೀಡದೇ ಇರುವುದು ಕಂಡು ಬಂದಿರುತ್ತದೆ.
ಅಲ್ಲದೆ ಸದರಿ ಕಾರ್ಯಕರ್ತೆಯು ಅನಧಿಕೃತವಾಗಿ ಅಂಗನವಾಡಿಗೆ ಗೈರು ಹಾಜರಾಗಿದ್ದು, ಗರ್ಭಿಣಿ/ಬಾಣಂತಿಯರಿಗೆ ಬಿಸಿಯೂಟವನ್ನು ತಯಾರಿಸಿರುವುದಿಲ್ಲ. ಗ್ರಾಮಸ್ಥರು ಮತ್ತು ಫಲಾನುಭವಿಗಳೊಂದಿಗೆ ಚರ್ಚಿಸಿದಾಗ ಸದರಿ ಕಾರ್ಯಕರ್ತೆಯ ವಿರುದ್ಧ ದೂರುಗಳನ್ನು ನೀಡಿರುತ್ತಾರೆ.
ಈ ಹಿಂದೆಯೂ ಸಹ ಸದರಿ ಗ್ರಾಮಸ್ಥರು ಮತ್ತು ಫಲಾನುವಿಗಳು ಅಂಗನವಾಡಿ ಕಾರ್ಯಕರ್ತೆಯ ಮೇಲೆ ದೂರುಗಳನ್ನು ನೀಡಿರುತ್ತಾರೆ. ಈ ಕುರಿತಂತೆ ಹಲವಾರು ಬಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶ್ರೀನಿವಾಸಪುರ ರವರು ನೋಟೀಸ್ ಅನ್ನು ಜಾರಿ ಮಾಡಲಾಗಿರುತ್ತದೆ. ದಾಖಲಾತಿಗಳನ್ನು ಪರಿಶೀಲಿಸಲಾಗಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದು ಸಹ ಕಂಡು ಬಂದಿರುತ್ತದೆ.
ಈ ಎಲ್ಲಾ ಅಂಶಗಳ ಬಗ್ಗೆ ಪರಿಶೀಲಿಸಿ ಸೆ.೧೮ ರಿಂದ ಅಂಗನವಾಡಿ ಕಾರ್ಯಕರ್ತೆಯಾದ ಆಲುವೇಲಮ್ಮ ರವರನ್ನು ಒಂದು ತಿಂಗಳ ಕಾಲ ವೇತನ ರಹಿತ ಕಡ್ಡಾಯ ರಜೆಯ ಮೇಲೆ ತೆರಳಲು ಕ್ರಮಕೈಗೊಳ್ಳಲಾಗಿದೆ.
ಹಾಗೂ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಆಯ್ಕೆ ಸಮಿತಿಯ ಅಧ್ಯಕ್ಷರ ಅನುಮೋದನೆಯನ್ನು ಪಡೆದು ಅಂಗನವಾಡಿ ಕಾರ್ಯಕರ್ತೆಯಾದ ಆಲುವೇಲಮ್ಮ ರವರನ್ನು ಕರ್ತವ್ಯದಿಂದ ವಜಾಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕೋಲಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಅನುಪಾಲನ ವರದಿಯನ್ನು ಸಲ್ಲಿಸಿದ್ದಾರೆ.