ಮಕ್ಕಳಿಗೆ ಕಾಕ್ಲೀಯಾರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಯು ವರದಾನವಾಗಿದೆ: ಡಾ.ಎಸ್.ಚಿದಂಬರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.28- ಶ್ರವಣ ದೋಷವು ಅನುವಂಶೀಯ, ಹುಟ್ಟಿನಿಂದ ಬರುವ ಕಾಯಿಲೆಗಳು, ಕೆಲ ಔಷಧಿಗಳ ಸೇವನೆಯಿಂದ ಹಾಗೂ ಶಬ್ದ ಮಾಲಿನ್ಯದಿಂದ ಉಂಟಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿದ್ದು, ಇದಕ್ಕೆ ಪರಿಹಾರವಾಗಿ ಮಕ್ಕಳಿಗೆ ಕಾಕ್ಲೀಯಾರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಯು ವರದಾನವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಶ್ರವಣ ದಿನಾಚರಣೆ ಹಾಗೂ ಶ್ರವಣ ಉಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶ್ರವಣ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಶ್ರವಣ ತಪಾಸಣೆ ನಡೆಸಿ ತೊಂದರೆಯುಳ್ಳ ಮಕ್ಕಳಿಗೆ ಕಾಕ್ಲೀಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿ ತಾಯಂದಿರು ಮಕ್ಕಳಲ್ಲಿ ಕಂಡುಬರುವ ಶ್ರವಣ ದೋಷ ನ್ಯೂನತೆಗಳನ್ನು ಪತ್ತೆ ಹಚ್ಚಿತಜ್ಞ ವೈದ್ಯರಲ್ಲಿ ತಪಾಸಣೆಗೆ ಒಳಪಡಿಸಬೇಕು ಎಂದು ಡಾ. ಎಸ್. ಚಿದಂಬರ ಅವರು ಸಲಹೆ ಮಾಡಿದರು.
ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಅಂಕಪ್ಪರವರು ಮಾತನಾಡಿ 2006-07ರಲ್ಲಿ ವಿಶ್ವ ಶ್ರವಣ ದಿನಾಚರಣೆ ಕಾರ್ಯಕ್ರಮ ಪ್ರಾರಂಭವಾಯಿತು. ಜಿಲ್ಲೆಯಲ್ಲಿ ಶ್ರವಣ ತಪಾಸಣೆ ನಡೆಸಿ ತೊಂದರೆಯುಳ್ಳ ಮಕ್ಕಳಿಗೆ ಕಾಕ್ಲೀಯಾರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಶ್ರವಣ ಸಂಜೀವಿನಿ ಕಾರ್ಯಕ್ರಮದಡಿ ಜನರಿಗೆ ಹೆಚ್ಚು ಸೌಲಭ್ಯಗಳು ದೊರೆಯಬೇಕು. ‘ಮನಸ್ಥಿತಿಗಳನ್ನು ಬದಲಾಯಿಸುವುದು’ ಈ ವರ್ಷದ ಘೋಷಣೆಯಾಗಿದೆ ಎಂದರು.
ಇದೇ ವೇಳೆ ಶ್ರವಣ ದೋಷವುಳ್ಳವರಿಗೆ ಶ್ರವಣ ಮತ್ತು ಶ್ರವಣ ಆರೈಕೆ ಸೇವೆಗಳನ್ನು ಸಾಫಲ್ಯಗೊಳಿಸುವ ಬಗ್ಗೆ ಮಾಹಿತಿ ನೀಡಿ 7 ಶ್ರವಣ ಸಾಧನಗಳು ಮತ್ತು ಬ್ಯಾಟರಿ ಶೆಲ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.
ಜಿಲ್ಲಾ ಆರ್.ಸಿ.ಹೆಚ್‍ಅಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಕುಷ್ಟರೋಗ ನಿಯಂತ್ರಾಣಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಆರೋಗ್ಯ ಮೇಲ್ವಿಚಾರಣ ಅಧಿಕಾರಿ ವೆಂಕಟೇಶ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ಶ್ರವಣ ತಜ್ಞರಾದ ಮೇಘನಾಶ್ರೀ, ಆಡಿಯೋಮೆಟ್ರಿಕ್ ಸಹಾಯ ಕರಾದಕುಮಾರಸ್ವಾಮಿ, ಇನ್‍ಸ್ಟ್ರಕ್ಟರ್ ಪರಮೇಶ್ವರ್, ಆರೋಗ್ಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತದ್ದರು.