ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ: ರಿಶಿ ಆನಂದ
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.28 : ಜನರಿಗೆ ಮತದಾನದ ಪ್ರಾಮುಖ್ಯತೆಯ ಅರಿವು ಮೂಡಿಸಿದಾಗ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೇರಿದಂತೆ ಎಲ್ಲ ಯುವ ಸಮೂಹ ಸಮನ್ವದಿಂದ ಯುದ್ದೋಪಾದಿಯಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ ಇವರ ಸಹಯೋಗದಲ್ಲಿ ಬುಧವಾರ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಹಿನ್ನೆಲೆಯಲ್ಲಿ ಭವಿಷ್ಯದ ಮತ್ತು ಯುವ ಮತದಾರರಿಗೆ ಮತದಾನದ ಶಿಕ್ಷಣ ಪ್ರಮುಖ್ಯತೆ ಜಾಗೃತಿ ಮತ್ತು ಅರಿವು ಮೂಡಿಸುವ ಕುರಿತು ಪದವಿ ಮತ್ತು ಬಿ.ಎಡ್. ಕಾಲೇಜು ರಾಯಭಾರಿ ಗಳಿಗೆ ಸ್ವೀಪ್ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಚುನಾವಣೆ ಕುರಿತಾಗಿ ಹಲವಾರು ತಪ್ಪು ಕಲ್ಪನೆಗಳು ಇರುತ್ತವೆ. ಅದೆ ರೀತಿ ಅಲ್ಲಿಯ ಜನರಿಗೆ ಸರಿಯಾದ ಮಾಹಿತಿಯ ಕೊರತೆಯಿಂದ ಮತದಾನ ಮಾಡುವಲ್ಲಿ ಹಿಂದೇಟು ಹಾಕುತ್ತಿರುತ್ತಾರೆ. ತರಬೇತಿಗೆ ಬಂದಿರುವ ರಾಯಭಾರಿಗಳು ಜನರಿಗೆ ಮತದಾನದ ಜವಾಬ್ದಾರಿಯಿಂದ ಆಗುವ ಪ್ರಯೋಜನಗಳು, ಮಹತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಗಾಮೀಣ, ಪಟ್ಟಣದ ಜನರು ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಯಿಂದ ವಂಚಿತರಾಗದಂತೆ ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಿಸುವಂತೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಹಾಗೂ ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯು ನಮ್ಮ ದೇಶದಲ್ಲಿ ಅತಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಈ ವ್ಯವಸ್ಥೆಯಲ್ಲಿ ಪ್ರಜೆಗಳ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಲು ನಾವೆಲ್ಲರೂ ಹಕ್ಕುಳ್ಳವರಾಗಿದ್ದೇವೆ. ಆದ್ದರಿಂದ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಇದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.
ಜಿಲ್ಲಾ ಚುನಾವಣಾ ತರಬೇತುದಾರರಾದ ಶ್ರೀರಾಮ ಭಟ್ಟ, ಸಂದೀಪ ದೆಶಪಾಂಡೆ, ಮಹಾಂತೇಶ ಅಂಗಡಿ, ಡಾ. ಚಿದಾನಂದ ಅನೂರು ಕಾಲೇಜಿನ ರಾಯಭಾರಿಗಳಿಗೆ ತರಬೇತಿ ನೀಡಿದರು.
ಯೋಜನಾ ವಿಭಾಗದ ಉಪ ನಿರ್ದೇಶಕ ಎ.ಬಿ. ಅಲ್ಲಾಪೂರ ಮತ್ತು ಸಿಬ್ಬಂದಿ ವರ್ಗದವರು, ಕಾಲೇಜು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ತರಬೇತಿಯಲ್ಲಿ ಭಾಗವಹಿಸಿದರು. ಶಿವಾನಂದ ಜಮಾದಾರ ಕಾರ್ಯಕ್ರಮವನ್ನು ನಿರೂಪಿಸಿದರು.