ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಮನುಷ್ಯನಾಗಲು ಸಾಧ್ಯ
ಕಲಬುರಗಿ:ಮಾ.26: ಸಕರಾತ್ಮಕ ಬದುಕು ಹಾಗೂ ಧನಾತ್ಮಕ ಚಿಂತನೆಯಿಂದ ಉತ್ತಮ ಮನುಷ್ಯನಾಗಲು ಸಾಧ್ಯವಿದೆ ಎಂದು ಡಾ. ಶರಣಬಸಪ್ಪ ವಡ್ಡನಕೇರಿ ಅಭಿಪ್ರಾಯಪಟ್ಟರು.
ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ ಕಳ್ಳಿಮಠದಲ್ಲಿ ಹಮ್ಮಿಕೊಂಡ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಾ ಭಾರತ ಒಂದು ಕಾಲದಲ್ಲಿ ವಿಶ್ವಕ್ಕೆ ಗುರುವಾದ ದೇಶ ಇಲ್ಲಿ ಅನೇಕ ಮಹಾತ್ಮರು, ರಾಷ್ಟ್ರ ನಾಯಕರು, ಸಾಧು,ಸಂತರು ಬಾಳಿ ಬದುಕಿದ ದೇಶವಾಗಿದೆ.ಇಂತಹ ನೆಲದಲ್ಲಿ ಹುಟ್ಟಿರುವ ನಾವೆಲ್ಲರೂ ನಿಜಕ್ಕೂ ಸುದೈವಿಗಳು ಆದರೆ ಇಂದು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ ಧರ್ಮ,ಆಚಾರ,ವಿಚಾರ, ಸಂಸ್ಕೃತಿ, ಪರಂಪರೆ,ಎಲ್ಲವನ್ನೂ ಮರೆತು ಅರ್ಥಹೀನ, ಉದ್ದೇಶವಲ್ಲದ ಖಾಲಿ ಕೊಡದಂತಹ ಜೀವನ ಸಾಗಿಸುತ್ತಿದ್ದು, ಹಣ ಹಾಗೂ ಅಧಿಕಾರದ ಬೆನ್ನು ಹಿಂದೆ ಬಿದ್ದು ತಾನು ಎಲ್ಲಿರುವೆ ಎಂಬುದನ್ನು ಸಹ ಮರೆತುಬಿಟ್ಟಿದ್ದೇವೆ. ಇದು ನಮ್ಮ ಅವನತಿಗೆ ಕಾರಣವಾಗುತ್ತಿದೆ. ಎಂಬುದನ್ನು ನಾವು ಸಹ ಅರಿತಿಲ್ಲ ಬರೀ ಭ್ರಮನಿರಸನದಲ್ಲಿ ಕಾಲ ಕಳೆಯುತ್ತಿದ್ದು, ಇದು ಬದಲಾವಣೆ ಆಗಬೇಕಾದರೆ ಬಸವಾದಿ ಶಿವಶರಣರ ವಚನ ಸಾಹಿತ್ಯ ರಾಷ್ಟ್ರ ನಾಯಕರ ಚರಿತ್ರೆ ಓದಿ ಅರ್ಥೈಸಿಕೊಂಡು ಮೈಗೂಡಿಸಿಕೊಂಡರೆ ಖಂಡಿತವಾಗಿಯೂ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಇಂದ ಬದುಕಲು ಸಾಧ್ಯವಿದೆ. ಅದಕ್ಕೆ ಇವತ್ತಿನ ಇಂತಹ ಕಾರ್ಯಕ್ರಮಗಳೇ ಸಾಕ್ಷಿ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಶರಣಗೌಡ ಪಾಟೀಲ ಪಾಳಾ ಮಾತನಾಡಿ ಮನುಷ್ಯ ತನ್ನಲ್ಲಿರುವ ದುರ್ಗುಣಗಳನ್ನು ತೊಡೆದುಹಾಕಿ ಉತ್ತಮ ಸಂಸ್ಕಾರಗಳನ್ನಾಗಿಸಲು ಶರಣರ ಹಾಗೂ ರಾಷ್ಟ್ರ ನಾಯಕರ ಜೀವನ ಚರಿತ್ರೆ ಅಧ್ಯಯನ ಅಗತ್ಯ ಜೊತೆಗೆ ಶರಣರ ಜೀವನದರ್ಶನಗಳನ್ನು ಅರಿತುಕೊಳ್ಳುವುದು ಅಗತ್ಯವಿದೆ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ವಿರೂಪಾಕ್ಷ ದೇವರು ವಹಿಸಿದ್ದು ವೇದಿಕೆ ಮೇಲೆ ಶಿವಲಿಂಗಯ್ಯ ಕಳ್ಳಿಮಠ, ಶಿವಯೋಗಿ ಕಳ್ಳಿಮಠ, ಅಂಬರಾಯ ಮಡ್ದೆ, ಉದಯಗೌಡ, ಚನ್ನಬಸಪ್ಪ, ಬಸವರಾಜ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಕುಮಾರ ಲಕ್ಷ್ಮಿಕಾಂತ ನಿರೂಪಿಸಿದರೆ ಕುಮಾರ ಚನ್ನಾವೀರ ಸ್ವಾಗತಿಸಿದರು.