ಭೀಮಾ ನದಿಗೆ ನೀರು ಹರಿಸಲು ಉಭಯ ಶಾಸಕರ ಭರವಸೆ
ಅಫಜಲಪುರ:ಮಾ.25: ಮಹಾರಾಷ್ಟ್ರದಿಂದ ಹರಿಯುವ ಭೀಮೆ ನಮ್ಮ ಭಾಗದಲ್ಲಿ ಸುಮಾರು 150 ಕಿಮೀ ಹರಿಯುತ್ತದೆ ಆದರೆ ಉಪಯೋಗವಾಗುತ್ತಿಲ್ಲ. ಮಳೆಯ ಸಂದರ್ಭದಲ್ಲಿ ಪ್ರವಾಹ ಬರುತ್ತದೆ. ಬೇಸಿಗೆಯಲ್ಲಿ ಭೀಮಾ ನದಿ ಬರಿದಾಗಿ ಸಂಕಷ್ಟ ಅನುಭವಿಸುತ್ತಿದ್ದೇವೆ. ಮಹಾರಾಷ್ಟ್ರ ಸರಕಾರ ನದಿ ಪಾತ್ರವನ್ನೇ ಬದಲಿಸಿ ಜಲ ಮೂಲವನ್ನೇ ಬದಲಿಸಿದ್ದಾರೆ. ಭೀಮಾ ನದಿಗೆ ನೀರು ಹರಿಸಲು ಸುಮಾರು 3 ತಿಂಗಳಿನಿಂದ ಪ್ರಯತ್ನ ಮಾಡುತ್ತಿದ್ದು ಬೆಂಗಳೂರಿಗೆ ತೆರಳಿ ಮತ್ತೆ ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುತ್ತದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರ ಸರಕಾರದ ಮೇಲೆ ಒತ್ತಡ ಹಾಕಿ, ಉಜನಿ ಜಲಾಶಯದಿಂದ ಹಿಳ್ಳಿ ಬ್ಯಾರೇಜ್ ಗೆ ಬರುತ್ತಿರುವ ನೀರನ್ನು ಭೀಮಾ ಜಲಾಶಯಕ್ಕೆ ಹರಿಸಿದರೆ ಬೇಸಿಗೆ ಪಾರಾಗಬಹುದು, ಈ ಕುರಿತು ಸಿಎಂ, ಡಿಸಿಎಂ ಅವರಿಗೆ ಮನವರಿಕೆ ಮಾಡುತ್ತೇವೆ. ನಾರಾಯಣಪುರ ಜಲಾಶಯದಿಂದ ಪೈಪ್ ಲೈನ್ ಮೂಲಕ ನೀರು ಹರಿಸಲು ಎಸ್ಟಿಮೇಟ್ ನಡೆದಿದೆ. ತಾಲೂಕಿನಲ್ಲಿ 16 ಕೆರೆ ತುಂಬುವ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಹಣದ ಕೊರತೆಯಿಂದ ಮಂದಗತಿಯಾಗಿದೆ. ಈ ಎಲ್ಲ ಯೋಜನೆಗಳು ಯಶಸ್ವಿಯಾದರೆ ನೀರಿನ ಕೊರತೆ ನೀಗಿಸಬಹುದು. ಭೀಮೆಯ ಉಳಿವಿಗೆ ನದಿ ಭಾಗದ ಎಲ್ಲ ಶಾಸಕರು ಒಂದಾಗಬೇಕಿದೆ. ಮಹಾರಾಷ್ಟ್ರದ ಉಜನಿ ಜಲಾಶಯಕ್ಕೆ ತಜ್ಞರ ಸಮಿತಿಯಿನ್ನು ಕಳುಹಿಸಲು ಸರಕಾರದೊಂದಿಗೆ ಚರ್ಚಿಸಿ ನಿಯೋಗವನ್ನು ಕಳುಹಿಸುವ ಕೆಲಸ ಮಾಡುತ್ತೇವೆ. ಶಿವಕುಮಾರ ನಾಟೀಕಾರ ಉಪವಾಸ ಕೈ ಬಿಡಿ. ನೀರು ಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಇಂಡಿ ಶಾಸಕರು ಹಾಗೂ ನಾವು ಜೊತೆಗೂಡಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಯಶವಂತರಾಯಗೌಡ ಪಾಟೀಲ್ ಮಾತನಾಡಿ, ಈ ಹೋರಾಟದಿಂದ ಭೀಮೆಯ ಬಗ್ಗೆ ಅಲಕ್ಷ್ಯ ಮಾಡಿದ್ದೇವೆ ಎಂಬುದು ಸರಕಾರದ ಗಮನಕ್ಕೆ ತಂದಿದೆ. ಅಧಿಕಾರ ಮಹತ್ವವಲ್ಲ ಭೀಮಾ ನದಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಮಹಾರಾಷ್ಟ್ರ ಸರಕಾರಕ್ಕೆ ನೀರು ಹರಿಸಲು ಎಲ್ಲ ಕಡೆಗೆ ಒತ್ತಡ ಹಾಕಿದರೂ ಅವರೂ ಅಸಹಾಯಕತೆ ತೋರುತ್ತಿದ್ದಾರೆ. ಆದರೂ ಕರ್ನಾಟಕದ ಗಡಿಭಾಗದವರೆಗೆ ನೀರು ಬಿಟ್ಟಿದ್ದಾರೆ. ಹಿಳ್ಳಿಯಿಂದ ನೀರು ಹರಿಸಿದರೆ ನಮಗೆ ತಲುಪುತ್ತವೆ. ನಾನು ರಾಕೇಶ ಸಿಂಗ್ ಜೊತೆಗೆ ಮಾತನಾಡಿದ್ದೇನೆ. ಒಂದು ಟಿಎಂಸಿ ನೀರು ಬಿಡಲು ಒಪ್ಪಿದ್ದಾರೆ ಆದರೆ ಅದು ಬಂದು ತಲುಪಲ್ಲ ಎನ್ನುತ್ತಿದ್ದಾರೆ. ಸದ್ಯ ಸರಕಾರ ಲೋಕಸಭಾ ಚುನಾವಣೆಯಲ್ಲಿದ್ದರೂ ನೀರು ಬಿಡಿಸಲು ಶಾಸಕ ಎಂ.ವೈ.ಪಾಟೀಲ್ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಸಮಸ್ಯೆಗಳು ಉದ್ಭವವಾದಾಗ ಅದಕ್ಕೆ ನಾವು ಧ್ವನಿಯಾದಾಗ ಮಾತ್ರ ನ್ಯಾಯ ಸಿಗುತ್ತದೆ. ನಿಮ್ಮ ನಿವೇದನೆ ಸರಕಾರಕ್ಕೆ ಮುಟ್ಟಿದೆ. ಸರ್ಕಾರದ ಹೋರಾಟದ ಜೊತೆಗೆ ನ್ಯಾಯಂಗ ಹೋರಾಟ ಮಾಡೋಣ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡೋಣ. ಮೊದಲು ಹೈ ಕೋರ್ಟ್ ಗೆ ಭೀಮೆಯ ದಡದ ನಾವೆಲ್ಲರೂ ತಜ್ಞರ ತಂಡದ ಜೊತೆಗೆ ಟೀಮ್ ತಯಾರಿ ಮಾಡಿ ಹೋರಾಡೋಣ, ನಮ್ಮ ಮುಂದಿನ ಪೀಳಿಗೆಯ ಉಳಿವಿಗೆ ಹೋರಾಡೋಣ. ಭಾಷಾ ಆಧಾರದಲ್ಲಿ ಪ್ರಾಂತ್ಯ ರಚನೆ ಆಗಿವೆ, ಆದರೆ ನೈಸರ್ಗಿಕ ಸಂಪತ್ತನ್ನು ಸಮಾನವಾಗಿ ಹಂಚಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ. ಚುನಾವಣೆ ಮುಗಿದ ನಂತರ ಎಲ್ಲರೂ ಜೊತೆಗೂಡಿ ಹೋರಾಟ ಮುಂದುವರಿಸೋಣ. ಭೀಮಾ ಮಿಸ್ ಮ್ಯಾನೇಜ್ಮೇಂಟ್ ನಿಂದ ನಮ್ಮ ಭಾಗವು ಪ್ರವಾಹದಿಂದ ಕೆಲವು ಸಮಯದಲ್ಲಿ ಹಾನಿಯಾಗುತ್ತಿದೆ. ಭೀಮೆಯ ಉಳಿವಿಗೆ ನಾನು ಪ್ರಾಮಾಣಿಕವಾಗಿ ಬೆಂಬಲಿಸುತ್ತೇನೆ. ಪ್ರಚಲಿತ ವಿದ್ಯಮಾನವನ್ನು ಅರಿತುಕೊಳ್ಳಬೇಕಾಗಿದೆ. ನಮ್ಮ ಪ್ರದೇಶದ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹಿರಿಯ ಶಾಸಕ ಎಂ.ವೈ.ಪಾಟೀಲ್ ಅವರ ನೇತೃತ್ವದಲ್ಲಿ ಸಿಎಂ, ಜಲ ಸಚಿವರು ಹಾಗೂ ಈ ಭಾಗದ ಶಾಸಕರು, ಹೋರಾಟ ಹಾಗೂ ಎಕ್ಸಪರ್ಟಗಳ ನೇತೃತ್ವದಲ್ಲಿ ಸಭೆ ಮಾಡೋಣ. ಬಳಗಾನೂರ ಕೆರೆಯಿಂದ 1 ಟಿಎಂಸಿ ನೀರು ಬಿಡುತ್ತೇವೆ ಎಂದಿದ್ದಾರೆ ಆದರೆ ಹೆಚ್ಚಿಗೆ ನೀರು ಬಿಡಿಸುವ ಪ್ರಯತ್ನ ಮಾಡುತ್ತೇವೆ. ನೀರಾವರಿ ಅಧಿಕಾರಿಗಳು ನಾವು ಸಂಕಷ್ಟದಲ್ಲಿದ್ದೇವೆ, ಮಿಸ್ ಮ್ಯಾನೇಜ್ಮೆಂಟ್ ಮಾಡಿದರೆ ಎಲ್ಲರೂ ಸಂಕಷ್ಟ ಪಡಬೇಕಾಗುತ್ತದೆ. ಬೆಂಗಳೂರಿಗೆ ತೆರಳಿ ಸಿಎಂ, ಡಿಸಿಎಂ ಜೊತೆಗೆ ಮಾತನಾಡಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಡುವುದಾಗಿ ತಿಳಿಸಿದರು.
ಹೋರಾಟಗಾರ ಶಿವಕುಮಾರ ನಾಟೀಕಾರ ಮಾತನಾಡಿ,1969 ರ ಬಚಾವತ್ ಐ ತೀರ್ಪಿನ ಪ್ರಕಾರ ಮಹಾರಾಷ್ಟ್ರ ಸರ್ಕಾರ 6 ವರ್ಷದಲ್ಲಿ ಉಜನಿ ಜಲಾಶಯ ನಿರ್ಮಿಸಿದರೂ ನಮ್ಮ ಸರಕರಾಗಳು ಸಮಯ ವಿಳಂಬ ಮಾಡಿವೆ. ಧುಳಖೇಡದಲ್ಲಿ ಕೇಂದ್ರ ಜಲಾಯೋಗದ ಜಲ ಮಾಪನ ಕೇಂದ್ರ ಮಾಹಿತಿ ನೀಡುತ್ತಿಲ್ಲ. ಬಚಾವತ್ ತೀರ್ಪು ಬಂದು 48 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಕರ್ನಾಟಕ ನೀರು ಬಳಕೆಯಲ್ಲಿ ಹಿಂದಿದೆ. ಕೇಂದ್ರ ಜಲ ಆಯೋಗದ ಅನುಮತಿ ಇಲ್ಲದೇ ಮಹಾರಾಷ್ಟ್ರ ಸರಕಾರ ಅಕ್ರಮವಾಗಿ ಸುರಂಗ ಮಾರ್ಗದ ಮೂಲಕ ಸೀನಾ ನದಿಗೆ ನೀರನ್ನು ಹರಿಸುತ್ತಿದೆ. ಸದ್ಯ ಭೀಮೆಗೆ ಬರುತ್ತಿರುವ ನೀರು ಉಜನಿ ಜಲಾಶಯದಲ್ಲ, ಬದಲಾಗಿ ಯುಕೆಪಿ ಕಾಲುವೆ ಮೂಲಕ ಹರಿಯುವ ನೀರು ಬಂದು ಸೇರುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ನೀರಾವರಿ ಯೋಜನೆಗಳಾದರೆ ಯುಕೆಪಿ ಕಾಲುವೆಯ ನೀರು ಬರುವುದಿಲ್ಲ. ಮುಂದಿನ ಭವಿಷ್ಯ ಬಹಳ ಕಷ್ಟವಾಗುತ್ತದೆ. ಬಚಾವತ್ ತೀರ್ಪಿನ ಹಕ್ಕಿನ ನೀರನ್ನು ಕೇಳಲು ಮುಂದಾಗಬೇಕಿದೆ.
ಸದ್ಯ ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ನೀರು ಪಡೆದರೆ ಬೇಸಿಗೆ ದಾಟಬಹುದು. ಏಷ್ಯಾದಲ್ಲೇ ಉಜನಿ ಡ್ಯಾಂ ನಲ್ಲಿ ಅತಿ ಹೆಚ್ಚು ಡೆಡ್ ಸ್ಟೋರೇಜ್ ಇದೆ ಆದರೆ ಮಾಹಿತಿ ಮಾತ್ರ ನೀಡುತ್ತಿಲ್ಲ. ಸದ್ಯ ನಮ್ಮ ಹಕ್ಕಿನ ಪ್ರತಿಪಾದನೆ ಮಾಡದಿದ್ದರೆ ಇಲ್ಲಿ ಭೀಮೆ ಇತ್ತು ಎಂಬುದು ಪುಸ್ತಕದಲ್ಲಿ ನೋಡಬೇಕಾಗುತ್ತದೆ.ಇಂಡಿ ಹಾಗೂ ಅಫಜಲಪುರ ಶಾಸಕರು ಸರಕಾರದಿಂದ ತಾಂತ್ರಿಕ ತಂಡವನ್ನು ಕಳುಹಿಸಿ, ಮಹಾರಾಷ್ಟ್ರ ಸರಕಾರಕ್ಕೆ ಕುಡಿಯಲು ನೀರು ಬಿಡಲು ಮನವಿ ಮಾಡೋಣ, ಮಣಿಯದಿದ್ದರೆ ಇಂದಿನಿಂದಲೇ ಕಾನೂನು ಹೋರಾಟಕ್ಕೆ ಅಣಿಯಾಗೋಣ. ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆಯಲ್ಲಿ ಸಿಎಂ, ಡಿಸಿಎಂ ಜೊತೆಗೆ ಚರ್ಚಿಸಿ ರಾಜಕೀಯ ಬದಿಗಿಟ್ಟು ನೀರಿಗಾಗಿ ನಿಮ್ಮ ಜೊತೆಗೆ ಇರುತ್ತವೆ. ಭೀಮಾ ನದಿಯ ನೀರು ಹಂಚಿಕೆಯಲ್ಲಿ ಮಹಾ ಮೋಸವಾಗಿದೆ, ಹೀಗೆ ಮುಂದುವರಿದರೆ ಅಮರ್ಜಾ ರೀತಿಯಲ್ಲಿ ಭೀಮೆಯು ಮುಳುಗಿ ಹೋಗುತ್ತದೆ. ನಾಳೆ ಸಿಎಂ, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ತಿಕೆಯಲ್ಲಿ ಚರ್ಚಿಸಿ 1.5 ಟಿಎಂಸಿ ನೀರು ಹರಿಸಲು ಆದೇಶ ಮಾಡಿ ಉಪವಾಸ ಕೈ ಬಿಡುತ್ತೇನೆ. ತಾರ್ಕಿಕ ಅಂತ್ಯ ಸಿಕ್ಕಾಗ ಮಾತ್ರ ಹೋರಾಟಕ್ಕೆ ಬೆಲೆ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್, ಅರುಣಕುಮಾರ ಪಾಟೀಲ್ ಗೊಬ್ಬೂರ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಹಿರಿಯ ಮುಖಂಡ ಮಕ್ಬೂಲ್ ಪಟೇಲ್, ಸಾಹೇಬಗೌಡ ಪೆÇೀಲಿಸ್ ಪಾಟೀಲ್, ದಯಾನಂದ ದೊಡ್ಮನಿ, ಚಿದಾನಂದ ಮಠ, ಶಾಂತು ಅಂಜುಟಗಿ, ರಾಮಣ್ಣ ನಾಯಕೋಡಿ, ಚಂದು ದೇಸಾಯಿ, ರಾಜು ಚವ್ಹಾಣ್, ಬಸಣ್ಣ ಗುಣಾರಿ, ಮಹಾಂತೇಶ ಬಳೂಂಡಗಿ, ಸಂತೋಷ ದಾಮಾ, ಜಮೀಲ್ ಗೌಂಡಿ, ಶಿವಪುತ್ರಪ್ಪ ಸಂಗೋಳಗಿ, ಸದಾಶಿವ ಮೇತ್ರೆ, ರೇಣುಕಾ ಸಿಂಗೆ, ಪ್ರಭಾವತಿ ಮೇತ್ರಿ, ಪ್ರತಿಭಾ ಮಹಿಂದ್ರಕರ ಅನೇಕರು ಉಪಸ್ಥಿತರಿದ್ದರು.