ಅಹಂಕಾರ ತನ್ನ ಅವನತಿಗೆ ಅಲಂಕಾರ: ಬಸವಲಿಂಗ ಪೂಜ್ಯರು
ಕಲಬುರಗಿ:ಮಾ.24:ಆತ್ಮ ತೃಪ್ತಿಯ ಕೊರತೆಯೆ ಬಡತನ ಈ ಕಾಯಿಲೆಗೆ ದುಡಿಮೆ ಎಂಬುವದೊಂದೆ ದಿವ್ಯ ಔಷಧ ಎಂದು ಮಲ್ಲಯ್ಯ ಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರು ಹೇಳಿದರು.
ಕಲಬುರಗಿ ನಗರದ ಗಂಜ ಕಾಲನಿಯ ಈಶ್ವರ ದೇವಸ್ಥಾನದ ಆವರಣದಲ್ಲಿ ಡಾ. ಬಸವಲಿಂಗ ಅವಧೂತ ಭಕ್ತರ ಕಲಬುರಗಿಯ ಮಂಡಳಿ ವತಿಯಿಂದ ಹಮ್ಮಿಕೊಂಡ ಪೂಜ್ಯರ ಪ್ರವಚನ ಹಾಗೂ ರುದ್ರಾಕ್ಷಿ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಾ ತಾಯಿ-ತಂದೆ ಮರಣಾ ನಂತರ ಚಿತೆಗೆ ಬೆಂಕಿ ಹಚ್ಚುವವರು ವಾರಸುದಾರರಲ್ಲ, ಮಂಚದ ಮೇಲೆ ಮಲಗಿದ ದಿನದಿಂದ ನೀರು, ಆಹಾರ, ಔಷಧ ಕೊಟ್ಟು ಉಪಚರಿಸುವವರೆ ನಿಜವಾದ ವಾರ ಸದಾರರು. ಮೈಲಿಗೆ ಅಂತ ಸತ್ತ ಅಪ್ಪನ ಜೊತೆ ಹಾಸಿಗೆ ದಿಂಬು ಕಂಬಳಿಯನ್ನು ಸುಟ್ಟರು ಆದರೆ ಅಪ್ಪ ಗಳಿಸಿಟ್ಟ ಆಸ್ತಿಯನ್ನು ಹೊಡೆದಾಡಿಕೊಂಡು ಹಂಚಿಕೊಂಡರು ಇಂಥ ವಾತಾವರಣದಲ್ಲಿ ನಾವು ಬೆಳೆಯುತ್ತಿರುವುದು ವಿಷಾದಕರ ಸಂಗತಿ. ಹತ್ತು ದೇವರನ್ನು ಪೂಜಿಸುವ ಬದಲು ಹೆತ್ತವರನ್ನು ಪೂಜಿಸಿ ಸಂಸ್ಕಾರ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ನೀಡುವ ಸಂಸ್ಕಾರದ ಕೊರತೆಯಿಂದ ವೃದ್ಧಾಶ್ರಮಗಳು, ಅಪರಾಧ ಪ್ರಕರಣಗಳು ಹೆಚ್ಚಾಗಿ ಸಮಾಜ ಅವನತಿಯತ್ತ ಸಾಗುತ್ತಿದೆ. ಭಾರತ ದೇಶ ಅಧ್ಯಾತ್ಮಿಕ ಹಾಗೂ ಸಂಸ್ಕಾರದಿಂದ ಜಗತ್ತಿಗೆ ಪರಿಚಯವಾದ ರಾಷ್ಟ್ರವಾಗಿದೆ. ಮಕ್ಕಳಿಗೆ ಅಕ್ಷರ ಜ್ಞಾನ ಕಡಿಮೆಯಾದರೂ ಚಿಂತೆ ಇಲ್ಲ ಮಾನವಿಯ ಮೌಲ್ಯ ಕಡಿಮೆಯಾಗಬಾರದು. ಮನುಷ್ಯ ಶುದ್ಧವಾದ ಮನಸ್ಸು, ಕಾಯಕದೊಂದಿಗೆ ಹಿರಿಯರನ್ನು ಗೌರವದಿಂದ ನೋಡಿಕೊಂಡು ಸರಳ ಜೀವನ ಸಾಗಿಸಿದರೆ ಸ್ವರ್ಗವೇ ಭೂಮಿಗೆ ಬರುತ್ತದೆ. ಬಸವಾದಿ ಶರಣರು ಹೇಳಿದಂತೆ ಸ್ವರ್ಗ- ನರಕ ಬೇರಿಲ್ಲ ಕಾಣಿರೋ ನಾವು ಮಾಡುವ ಕಾರ್ಯದಲ್ಲಿ ಸ್ವರ್ಗ ನರಕಗಳು ಉಂಟೆಂದು ಹೇಳಿದಾರೆ. ಶರಣರು ಸಹಿತ ಸರಳ ಜೀವನದೊಂದಿಗೆ ಕಾಯಕ ಮಾಡಿ ಮತ್ತೊಬ್ಬರಿಗೆ ಕೆಟ್ಟದ್ದನ್ನು ಬಯಸದೆ ಜೀವನ ಸಾಗಿಸಿ ಅಮರರಾಗಿ ಉಳಿದಿದ್ದಾರೆ. ಅಂಥವರ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಸಮಾಜ ನಿರ್ಮಿಸಬೇಕು.ಶರೀರ ಹಣ್ಣಾದರು ಪರವಾಗಿಲ್ಲ ಇನ್ನೊಬ್ಬರ ಬದುಕಿಗೆ ಹುಣ್ಣಾಗಬಾರದು. ಅದರಂತೆ ಅಹಂಕಾರದ ಬದುಕು ತನ್ನ ಅವನತಿಗೆ ಹಚ್ಚಿದ ಅಲಂಕಾರವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಇದೇ ಸಂದರ್ಭದಲ್ಲಿ ಪೂಜ್ಯರಿಗೆ ಪ್ರಭಾಕರ ಎಸ್. ಚಕ್ಕಿ ಅವರಿಂದ ರುದ್ರಾಕ್ಷಿ ತುಲಾಭಾರ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಕ್ತರು ಭಾಗವಹಿಸಿದರು.