ಕಲ್ಬುರ್ಗಿ – ಮಂಗಳೂರು ಅಮೋಘವರ್ಷ ಬಸ್ ಸೇವೆಗೆ ಸುವರ್ಣ ದಿನ
ಕಲಬುರಗಿ:ಮಾ.24: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಲ್ಬುರ್ಗಿಯಿಂದ ಮಂಗಳೂರಿಗೆ ಪ್ರಾರಂಭಿಸಿದ ಅಮೋಘ ವರ್ಷ ಬಸ್ ಸೇವೆಗೆ ಮಾರ್ಚ್ 21ರಂದು 50 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘದಿಂದ ಹಾರ್ದಿಕ ಶುಭಾಶಯ ಕೋರಲಾಯಿತು.
ಕೆಕೆಆರ್ ಟಿಸಿ ಸಂಸ್ಥೆಯು ಮಂಗಳೂರಿಗೆ ಸ್ಲೀಪರ್ ಕೋಚ್ ನಾನ್ ಎಸಿ ಬಸ್ ಸೇವೆ ಪ್ರಾರಂಭಿಸಿ ಉತ್ತಮ ಸೇವೆಯನ್ನು ನೀಡುತ್ತಿದ್ದು ಸುರಕ್ಷಿತ ಪ್ರಯಾಣಕ್ಕಾಗಿ ಹೆಚ್ಚಿನ ಪ್ರಯಾಣಿಕರು ಅಮೋಘ ವರ್ಷ ಬಸ್ಸನ್ನು ಅವಲಂಬಿಸಿ ಪ್ರಯಾಣಿಸುತ್ತಿದ್ದಾರೆ ಸಾಯಂಕಾಲ 5 ಗಂಟೆಗೆ ಕಲ್ಬುರ್ಗಿಯಿಂದ ಹೊರಟು ಮರುದಿನ ಬೆಳಿಗ್ಗೆ 7.30 ಕ್ಕೆ ಮಂಗಳೂರಿಗೆ ತಲುಪುವ ಅಮೋಘವರ್ಷ ಬಸ್ ಮಂಗಳೂರಿನಿಂದ ಸಾಯಂಕಾಲ 5 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 7.30 ಕ್ಕೆ ಕಲಬುರ್ಗಿಯನ್ನು ತಲುಪುತ್ತಿದೆ. ಮಂಗಳೂರಿಗೆ ಹೆಚ್ಚಾಗಿ ಮಹಿಳೆಯರು ಪ್ರಯಾಣಿಸಲು ಈ ಬಸ್ಸನ್ನು ಆಯ್ಕೆ ಮಾಡುತ್ತಿರುವುದು ಸಂತಸದ ಸಂಗತಿ ಆಗಿದೆ ಎಂದು ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ.
ಕೆಕೆಆರ್‍ಟಿಸಿ ಯ ಉತ್ತಮ ಸೇವೆಗಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ ರಾಚಪ್ಪ ಹಾಗೂ ವಿಭಾಗೀಯ ನಿಯಂತ್ರಣ ಅಧಿಕಾರಿಗಳಾದ ನಾರಾಯಣ ಕುರುಬರ್ ಹಾಗೂ ಅಮೋಘವರ್ಷ ಬಸ್ ಚಾಲಕರಿಗೆ ಸಂಘವು ಅಭಿನಂದನೆ ಸಲ್ಲಿಸಿದೆ. ಶನಿವಾರ ಮತ್ತು ಭಾನುವಾರಗಳಂದು ಎರಡು ಕಡೆಗಳಿಂದ ಬಸ್ಸು ಪೂರ್ಣ ಪ್ರಮಾಣದಲ್ಲಿ ತುಂಬುತ್ತಿದ್ದು ವಾರದ ನಡುವೆ ಇನ್ನೂ ಹೆಚ್ಚಿನ ಸೀಟುಗಳನ್ನು ಸಂಸ್ಥೆಯು ನಿರೀಕ್ಷಿಸುತ್ತಿದೆ.ಇದಕ್ಕೆ ಪ್ರಯಾಣಿಕರು ಸಹಕರಿಸಬೇಕೆಂದು ವ್ಯವಸ್ಥಾಪಕ ನಿರ್ದೇಶಕರಾದ ಎಂ ರಾಚಪ್ಪ ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಕುರುಬರ್ ಅವರು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ಅಗತ್ಯ ಬಿದ್ದಲ್ಲಿ ಮುಂದಿನ ದಿನಗಳಲ್ಲಿ ಹವಾ ನಿಯಂತ್ರಿತ ಕಲ್ಯಾಣ ರಥ ಬಸ್ ಸೇವೆಯನ್ನು ಮಂಗಳೂರಿಗೆ ಪ್ರಾರಂಭಿಸಲು ಸಿದ್ಧವಿರುವುದಾಗಿ ರಾಚಪ್ಪ ಅವರು ತಿಳಿಸಿದ್ದಾರೆ. ಸದ್ಯ ಸಂಚರಿಸುತ್ತಿರುವ ಬಸ್ಸುಗಳನ್ನು ಪ್ರಯಾಣಿಕರ ಅನುಕೂಲತೆಗೆ ಅನುಸಾರವಾಗಿ ಮೂಡುಬಿದ್ರೆ ಸೇರಿದಂತೆ ಪಕ್ಕದ ಊರುಗಳ ವರೆಗೆ ವಿಸ್ತರಿಸಲು ಕೂಡಾ ಸಂಸ್ಥೆಯು ಸದಾ ಸಿದ್ದ ಎಂದು ಅವರು ತಿಳಿಸಿದ್ದಾರೆ.