ಕಗ್ಗೋಡದಲ್ಲಿ ಸಜ್ಜನ ಕಲ್ಯಾಣ ಮಂಟಪ ಹಾಗೂ ಗೋ ಆಧಾರಿತ ಕೃಷಿ ತರಬೇತಿ ಕೇಂದ್ರ ಉದ್ಘಾಟನೆ
ವಿಜಯಪುರ,ಅ.4:ತಾಲ್ಲೂಕಿನ ಕಗ್ಗೋಡದಲ್ಲಿರುವ ಶ್ರೀ ರಾಮನಗೌಡ ಪಾಟೀಲ (ಯತ್ನಾಳ) ಗೋ ರಕ್ಷಾ ಕೇಂದ್ರವು ಗುರುವಾರ ವಿಶಿಷ್ಟ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಸಾರ್ವಜನಿಕರಿಗೆ ಮದುವೆ ಮತ್ತಿತರೆ ಶುಭ ಕಾರ್ಯಗಳ ಆಯೋಜನೆಗೆ ಹಾಗೂ ಗೋವು ಉತ್ಪನ್ನಗಳ ಬಗ್ಗೆ ತರಬೇತಿ ನೀಡಲು ಅನುಕೂಲವಾಗಲೆಂದು ಗೋ ರಕ್ಷಾ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಮಾತೋಶ್ರೀ ಬಂಗಾರಮ್ಮ ಬಸಪ್ಪ ಸಜ್ಜನ ಕಲ್ಯಾಣ ಮಂಟಪ ಹಾಗೂ ಗೋ ಆಧಾರಿತ ಕೃಷಿ ತರಬೇತಿ ಕೇಂದ್ರವನ್ನು ಸಿಂಗಾರಗೊಂಡ ಐದು ಗೋಮಾತೆಗಳಿಗೆ ಪೂಜೆ ಸಲ್ಲಿಸಿ, ಒಳಪ್ರವೇಶ ಮಾಡಿಸುವ ಮೂಲಕ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಲೋಕಾರ್ಪಣೆಗೊಳಿಸಿದರು.
ನಂತರ ಗೋಮಾತೆಯ ಕಲ್ಯಾಣ ಮಹೋತ್ಸವ (ಆಕಳು ಮತ್ತು ಹೋರಿ ಮದುವೆ) ನೆರವೇರಿಸಿ, ಕಲ್ಯಾಣ ಕಾರ್ಯವಾದ ಮದುವೆ ಮತ್ತಿತರೆ ಶುಭ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶೇಷವಾಗಿ ಚಾಲನೆ ನೀಡಲಾಯಿತು.
ಇದಕ್ಕೂ ಮೊದಲು ಕಲ್ಯಾಣ ಮಂಟಪದಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಇದೇ ವೇಳೆ ಸಿದ್ದೇಶ್ವರ ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಯಾಗಳನ್ನು ಗೌರವಿಸಲಾಯಿತು. ನಂತರ ಸಾರ್ವಜನಿಕರ ಅಹವಾಲು ಆಲಿಸಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಗೌರವ ಕಾರ್ಯದರ್ಶಿ ಸದಾನಂದ ದೇಸಾಯಿ, ಬಸವರಾಜ ಸುಗೂರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ವಿಜಯಕುಮಾರ ಡೋಣಿ, ಬಸವರಾಜ ಗಣಿ, ಸಂಗನಗೌಡ ನಾಡಗೌಡ, ಸುಧೀರ ಚಿಂಚಲಿ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ರಮೇಶ ಹಳ್ಳದ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ಶೈಲಜಾ ಪಾಟೀಲ, ಸೀಮಾ ಕೋರೆ, ರಮೇಶ ಬಿರಾದಾರ, ಗಣಪತಿ ಜಾಧವ, ವ್ಯವಸ್ಥಾಪಕ ನಿರ್ದೇಶಕರಾದ ಜ್ಯೋತಿಬಾ ಖಂಡಾಗಳೆ, ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.