ನೀರು ಜೀವನದ ಅಮೃತ-ಮಿತಬಳಕೆಗೆ ಮುಂದಾಗಿ: ಸಂತೋಷ ಬಂಡೆ
ಇಂಡಿ: ಮಾ.23:’ನೀರು ಜೀವನದ ಅಮೃತ’. ಪ್ರತಿಯೊಬ್ಬರೂ ನೆಲ -ಜಲ, ಅಂತರ್ಜಲ ಮತ್ತು ಮಳೆನೀರು ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಉಳಿಕೆ, ಗಳಿಕೆ ಮತ್ತು ಬಳಕೆಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಕೆಜಿಎಸ್ ಶಾಲೆಯಲ್ಲಿ ವಿಶ್ವ ಜಲ ದಿನದ ನಿಮಿತ್ತ ‘ನೀರಿನ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಲ ಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಸದ್ಬಳಕೆ, ಹಸಿರೀಕರಣ-ಈ ಅಂಶಗಳನ್ನು ಪಾಲನೆ ಮಾಡುತ್ತಾ,
ಭವಿಷ್ಯದಲ್ಲಿ ಎದುರಾಗುವ ಕರಾಳ ದಿನಗಳನ್ನು ನಮ್ಮ ಸಮಯೋಚಿತ ಚಿಂತನೆ, ನಿರ್ಧಾರಗಳಿಂದ ಪಾರು ಮಾಡುವ ಅಗತ್ಯ ಇದೆ ಎಂದು ಹೇಳಿದರು.
ಶಿಕ್ಷಕಿ ಎಸ್ ಡಿ ಬಿರಾದಾರ ಮಾತನಾಡಿ,ನಾವು ಬಳಸುವ ಹನಿ ಹನಿ ನೀರು ಪ್ರಕೃತಿಯ ನಿರಂತರ ದುಡಿಮೆಯ ಬೆವರು ಎಂಬ ಸತ್ಯದ ಅರಿವನ್ನು ಮಕ್ಕಳಿಗೆ ತಿಳಿ ಹೇಳಬೇಕು. ಜಲ ಸಂರಕ್ಷಣೆ, ಜಲಮೂಲಗಳ ರಕ್ಷಣೆ, ನೀರಿನ ಮಿತ ಬಳಕೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವದು ಬಹುಮುಖ್ಯ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ ಅಧ್ಯಕ್ಷತೆ ವಹಿಸಿದ್ದರು.
ಜಲವೇ ಜೀವಜಾಲ, ಅಂತರ್ಜಲ ಸಂರಕ್ಷಣೆ-ಎಲ್ಲರ ಹೊಣೆ, ಕೆರೆ ಸಂರಕ್ಷಿಸಿ-ಅಂತರ್ಜಲ ಹೆಚ್ಚಿಸಿ, ನೀರು ಉಳಿಸಿ-ಭೂಮಿ ಉಳಿಸಿ ಎಂಬ ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಅನೇಕ ಘೋಷಣಾ ಫಲಕಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಶಿಕ್ಷಕರಾದ ಎಸ್ ಎಂ ಪಂಚಮುಖಿ,ಎಸ್ ಬಿ ಕುಲಕರ್ಣಿ,
ಎಸ್ ಎನ್ ಡಂಗಿ, ಜೆ ಸಿ ಗುಣಕಿ, ಅತಿಥಿ ಶಿಕ್ಷಕರಾದ ಸಂತೋಷ ಬಿರಾದಾರ, ಯಲ್ಲಮ್ಮ ಸಾಲೋಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.