ಶ್ರೀ ವಿಶ್ವಕರ್ಮ ಜಯಂತಿ
ಗದಗ,ಸೆ18: ವಿಶ್ವಕರ್ಮ ಸಮಾಜದವರು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ನಿರ್ವಹಸಿ ವಿಶೇಷ ಕಲೆಯ ಮೂಲಕ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ ಅವರು ಹೇಳಿದರು.
ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಶ್ರೀ ವಿಶ್ವಕರ್ಮ ಜಯಂತಿಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದವರು ಏಕಾಗ್ರತೆಯಿಂದ ಶಿಲ್ಪಕಲೆ, ಪತ್ತಾರ, ಬಡಿಗೇರ ಅಂತಹ ಅನೇಕ ವಿಶೇಷ ಕಲೆಯನ್ನು ಕಲೆತು ಉತ್ತಮ ಪ್ರತಿಭೆಯನ್ನು ಹೊಂದಿ ಸುಂದರವಾದ ರೂಪ ನೀಡುತ್ತಾರೆ. ಪ್ರಸ್ತುತ ದಿನಮಾನದಲ್ಲಿ ಯಂತ್ರಗಳ ಹಾವಳಿ ಹೆಚ್ಚಾಗಿದ್ದು, ಮಾನವ ತಯಾರಿಸುತ್ತಿದ್ದ ಎಲ್ಲಾ ರೀತಿಯ ಶೈಲಿಗಳನ್ನು ಯಂತ್ರಗಳು ಸರಾಗವಾಗಿ ಮಾಡುತ್ತಿವೆ. ಹಾಗಾಗಿ ಈ ಕಲೆಗಳು ಕೇವಲ ಯಂತ್ರಗಳಿಗೆ ಸೀಮಿತ ಆಗದೆ, ನಿಮ್ಮ ಪೂರ್ವಜರು ನೀಡಿದ ವಿದ್ಯೆಯನ್ನು ಇಂದಿನ ಯುವಪೀಳಿಗೆಗೆ ಕಲಿಸಿ ಈ ಕಲೆಯನ್ನು ಉತ್ತಂಗಕ್ಕೆ ಬೆಳಿಸಬೇಕು ಎಂದು ಹೇಳಿದರು.
ವಿಶ್ವಕರ್ಮ ಜಯಂತಿಯ ಅಂಗವಾಗಿ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೀರಿ ಇದೇ ರೀತಿ ಉತ್ತಮ ಕಲ್ಯಾಣ ಕಾರ್ಯಗಳಾಗಬೇಕು. ಸಮಾಜದ ಸಂಘಟನೆ ದಿನ ದಿನಕ್ಕೆ ಬಲಗೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ನುಡಿದರು.
ಶ್ರೀ ಗುರು ಭೀಮಾ ಶಂಕರ ವಿದ್ಯಾಪೀಠದ ಅಧ್ಯಕ್ಷರಾದ ಬಸವರಾಜ ಬಡಿಗೇರ ಮಾತನಾಡಿ, ಮೂಲತಃ ವಿಶ್ವಕರ್ಮ ಸಮಾಜದವರು ತ್ಯಾಗ ಸ್ವರೂಪಿಗಳು ಎಲ್ಲವನ್ನು ಕಳೆದುಕೊಂಡರು ಸದಾ ಸಂತೋಷದಿಂದ ಇದ್ದು, ಶ್ರಮ ಸಂಸ್ಕೃತಿಯಲ್ಲಿ ನಂಬಿಕೆಯಿಟ್ಟು ವಿಷದಲ್ಲಿ ಅಮೃತ ಕಂಡು, ಮಣ್ಣಿನಲ್ಲಿ ಮಾಣಿಕ್ಯವನ್ನು ಕಂಡವರು. ನಮ್ಮ ಸಮಾಜವೂ ತುಂಬಾ ಹಳೆಯದಾಗಿದ್ದು ವೇದ ಪುರಾಣಕ್ಕು ಮೊದಲೇ ವಿಶ್ವಕರ್ಮ ಸಮಾಜದ ಅಸ್ತಿತ್ವ ಇತ್ತು ಎಂದರು.
ಪ್ರಸ್ತುತ ದಿನಗಳಲ್ಲಿ ವಿಶ್ವ ಕರ್ಮ ಸಮಾಜದಲ್ಲಿ ಅಪಾರ ಜ್ಞಾನ ಮತ್ತು ಉತ್ತಮ ಪ್ರತಿಭೆಹೊಂದಿದವರಿದ್ದಾರೆ. ಹಾಗಾಗಿ ಎಲ್ಲರು ಒಂದಾಗಿ ಒಗ್ಗಟ್ಟಿನಿಂದ ಸಂಘಟನೆಯನ್ನು ಗಟ್ಟಿಗೊಳಿಸಿ ಸರ್ಕಾರದಿಂದ ದೊರೆಯುವ ಸೌಕರ್ಯಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿ ಸುದೀರ್ಘವಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಮೆಹಬೂಬಸಾಬ ನದಾಫ, ಕುರ್ತಕೋಟಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಗೀರಿಶ ಎಂ ಡಬಾಲಿ, ಕೃಷ್ಣಗೌಡ ಪಾಟೀಲ, ಗದಗ ತಾಲೂಕ ತಹಶಿಲ್ದಾರರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ಕಾರ್ಮಿಕ ಅಧಿಕಾರಿ ಶ್ರೀ ಶೈಲ ಸೊಮನಕಟ್ಟಿ, ಖಜಾನೆ ಇಲಾಖೆ ಉಪನಿರ್ದೇಶಕರು ವಿ ಹರಿನಾಥ ಬಾಬು ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸಾದ ಸುತಾರ ಮತ್ತು ತಂಡದವರು ಸಂಗೀತ ಪ್ರಸ್ತುತ ಪಡಿಸಿದರು. ಕಾರ್ಯಕ್ರಮವನ್ನು ವಿಶ್ವನಾಥ ಕಮ್ಮಾರ ನಿರ್ವಹಿಸಿದರು.