ಮೇಕೆದಾಟು: ಡಿಎಂಕೆ ಹೇಳಿಕೆಗೆ ಕಾಂಗ್ರೆಸ್ ಉತ್ತರಿಸಲಿ: ಜೋಶಿ

ಹುಬ್ಬಳ್ಳಿ,ಮಾ.22: ಇಂಡಿಯಾ ಅಲೈಯನ್ಸ್ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ನಿಲ್ಲಿಸುತ್ತೇವೆ ಎಂಬ ಡಿಎಂಕೆ ನಾಯಕರ ಹೇಳಿಕೆಯನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಸೇರಿದಂತೆ ಕಾಂಗ್ರೆಸ್’ನವರು ಖಂಡಿಸುತ್ತಾರೆಯೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಎಂಕೆ ಇಂಡಿಯಾ ಒಕ್ಕೂಟದ ಭಾಗವಾಗಿದ್ದು, ಮೇಕೆದಾಟುವಿನ ಕುರಿತು ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ತಡೆಹಿಡಿಯುವುದಾಗಿ ಘೋಷಣೆ ಮಾಡಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಈ ಹಿಂದೆ ಕಾಂಗ್ರೆಸ್’ನವರು ನಮ್ಮ ನೀರು, ನಮ್ಮ ಹಕ್ಕು ಎಂದು ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ್ದರು. ಇದೀಗ ಕಾಂಗ್ರೆಸ್’ನವರು ಏನು ಹೇಳತ್ತಾರೆ? ಎಂದು ಪ್ರಶ್ನಿಸಿದ ಅವರು ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್ ಬಂಧನದ ಕುರಿತು ಮಾತನಾಡಿ, ಅರವಿಂದ ಕ್ರೇಜಿವಾಲ್ ಒಬ್ಬ ದುರಹಂಕಾರಿ ಆಗಿದ್ದು, ಸಮನ್ಸ’ಗಳಿಗೆ ಉತ್ತರಿಸದ ಕಾರಣ ಬಂಧನವಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದರು.
ಕಾಂಗ್ರೆಸ್’ನವರ ಬ್ಯಾಂಕ್ ಖಾತೆ ಸ್ಥಗಿತ ಮಾಡಿರುವ ವಿಷಯ ಕುರಿತು ಪ್ರತಿಕ್ರಿಯೆ ನೀಡಿ, ಇದು ಆದಾಯ ತೆರಿಗೆ ಸಂಬಂಧಿತ ವಿಷಯವಾಗಿದ್ದು, ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ. ಕಾಂಗ್ರೆಸ್’ನ್ನು ನಾವು ಶಕ್ತಿ ಹೀನಗೊಳಿಸುವ ಅಗತ್ಯವಿಲ್ಲ, ಜನರೇ ಶಕ್ತಿಹೀನಗೊಳಿಸಿದ್ದಾರೆ. ಕಾಂಗ್ರೆಸ್’ನವರು ಯಾರೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.