ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಪ್ರವೀಣ್ ಶೆಟ್ಟಿ ಬಣ ಜಾಥಾ
ಬೆಂಗಳೂರು, ಸೆ. ೧೮-ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿನ ಮಹತ್ವಾಕಾಂಕ್ಷಿ ಯೋಜನೆಯಾದ ಕಳಸಾ ಬಂಡೂರಿ ನಾಲಾ ಯೋಜನೆ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದ್ದು ಈ ಭಾಗದ ಜನರಿಗೆ ಕುಡಿಯುವ ನೀರಿನ ಅಭಾವ ಹೇಳತೀರದಾಗಿದೆ. ಮೇಲಿಂದ ಮೇಲೆ ಗದಗ ಜಿಲ್ಲೆ ಬರಗಾಲಕ್ಕೆ ತುತ್ತಾಗುತ್ತಿದ್ದು ಜನರು ಸಂಕಷ್ಟದಲ್ಲಿದ್ದಾರೆ.

ಈ ಯೋಜನೆಗೆ ಮೀಸಲಿರಿಸಿದ್ದ ಭೂಮಿ ಗೋವಾ ಸರ್ಕಾರದ ವಿದ್ಯುತ್ ಯೋಜನೆಯ ಪಾಲಾಗಿದ್ದು, ಕೇಂದ್ರದ ವನ್ಯ ಜೀವಿ ಮಂಡಳಿ ಅನುಮತಿ ನೀಡಿದ್ದು ೪೩೫ ಎಕರೆಯಲ್ಲಿ ವಿದ್ಯುತ್ ಯೋಜನೆಗೆ
ಹಸಿರು ನಿಶಾನೆ ಸಿಕ್ಕಂತಾಗಿದೆ. ಆನೆ, ಹುಲಿ, ಕಾರಿಡಾರ್ ಅಭಯಾರಣ್ಯವಿದ್ದರು ಲೆಕ್ಕಿಸದೆ ಅನುಮತಿ ನೀಡಿದೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಆರೋಪಿಸಿದ್ದಾರೆ.
ಕುಡಿಯುವ ನೀರಿನ, ಕರ್ನಾಟಕದ ಹೋರಾಟಕ್ಕೆ ಸುಪ್ರೀಂ ಕೋರ್ಟಿನ ಪ್ರಕರಣ ನೆಪವೊಡ್ಡಿ ರಾಜ್ಯದ ಮನವಿಯನ್ನು ತಿರಸ್ಕರಿಸುತ್ತಿರುವ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ. ಈ ಕೂಡಲೇ ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕೊಂಡೊಯ್ದು ಪ್ರಧಾನಿಗಳನ್ನು ಭೇಟಿ ಮಾಡಿ ತೀವ್ರ ಪ್ರತಿಭಟನೆಯನ್ನು ದಾಖಲಿಸಿ ಎಚ್ಚರಿಕೆಯನ್ನು ರವಾನಿಸಬೇಕು ಕಾನೂನಿನ ಹೋರಾಟಕ್ಕೆ ಮುಂದಾಗಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಇಂದು ಮಧ್ಯಾಹ್ನ ೨:೦೦ ಗಂಟೆಗೆ ಮೇಕ್ರಿ ವೃತ್ತದಿಂದ ನೂರಾರೂ ವಾಹನಗಳಲ್ಲಿ ಹೊರಾಡಲಾಗುವುದು. ಅಂದು ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿ, ೧೯ರ ಬೆಳಗ್ಗೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿರಾಯಣ್ಣ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು ಹಾಗೂ ಕಾರ್ಯಕರ್ತರೊಂದಿಗೆ ವಾಹನಗಳ ಮೂಲಕ ನರಗುಂದ ತಲುಪಲಾಗುವುದು. ನಂತರ ಹೋರಾಟದಲ್ಲಿ ಹುತಾತ್ಮರಾದ ಹೋರಾಟಗಾರರಿಗೆ ನಮಿಸಿ, ನರಗುಂದದಿಂದ ಗದಗಿನವರೆಗೆ ಎರಡು ದಿನಗಳ ಪಾದಯಾತ್ರೆ ಆರಂಭಿಸಲಾಗುವುದು.