ಬಿಎಸ್ ವೈ ವಿರುದ್ಧ ಮಾತನಾಡಿದರೂ ಮಕ್ಕಳು ರಕ್ಷಣೆಗೆ ಹೋಗುತ್ತಿಲ್ಲ : ಆಯನೂರು ಮಂಜುನಾಥ್

ಸಂಜೆವಾಣಿ ವಾರ್ತೆ
ಶಿವಮೊಗ್ಗ,ಮಾ.೨೦; ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಅವಮಾನ ಮಾಡಿದರೂ ಕೂಡ ಬಿಜೆಪಿಯ ಯಾರೂ ಅವರ ವಿರುದ್ಧ ಮಾತನಾಡಲಿಲ್ಲ. ಸ್ವತಃ ಅವರ ಮಕ್ಕಳೇ ತಂದೆಗೆ ಅವಮಾನವಾದರೂ ಕೂಡ ತುಟಿಪಿಟಿಕ್ ಎನ್ನಲಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪ ಯಡಿಯೂರಪ್ಪನವರ ಎದೆ ಸೀಳಿದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ ಕರಾಂದ್ಲಾಜೆ ಇರುತ್ತಾಳೆ ಎಂದು ಅಪಾರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಇಂತಹ ಮಾತನಾಡಿದರು ಕೂಡ ಯಾರೂ ಈ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಒಂದು ರೀತಿಯಲ್ಲಿ ಯಡಿಯೂರಪ್ಪನವರ ಚಾರಿತ್ರö್ಯ್ರಕ್ಕೆ ಕೆಟ್ಟ ಹೆಸರು  ಬರುವ ರೀತಿಯಲ್ಲಿ ಮಾತನಾಡಿದರು ಕೂಡ ಸುಮ್ಮನಿದ್ದರು ಎಂದರು.ನಾನೇ ಆಗಿದ್ದರೆ ಖಂಡಿತ ಬಿ.ಎಸ್. ಯಡಿಯೂರಪ್ಪನವರ ರಕ್ಷಣೆಗೆ ಹೋಗುತ್ತಿದ್ದೆ. ಆದರೆ ಅವರ ಮಕ್ಕಳು ಚಾರಿತ್ರ‍್ಯ ಹೋದರೂ ಸುಮ್ಮನಿದ್ದಾರೆ. ತಂದೆಯ ಉತ್ತರಾಧಿಕಾರ ಬೇಕು, ಆಸ್ತಿ ಬೇಕು, ಅವಮಾನ ಮಾಡಿದರೆ ತಿರುಗಿ ಮಾತನಾಡುವ ಶಕ್ತಿ ಅವರು ಕಳೆದುಕೊಂಡಿದ್ದಾರೆ ಎಂದರು.ದೇವಿಯ ಉಪಾಸನೆಯೇ ನಮ್ಮ ಗುರಿ, ನಾರಿಯೆ ನಮ್ಮ ಶಕ್ತಿ ಎಂದು ಹೇಳುವ ಬಿಜೆಪಿಗರು ಶೋಭಾ ಕರಂದ್ಲಾಜೆಯ ಅವಹೇಳನ ಮಾಡಿದರೂ ಕೂಡ ಸುಮ್ಮನಿದ್ದಾರೆ. ಇದು ಕೇವಲ ರಾಜಕೀಯ ಪ್ರಭಾವವಾಗಿ ಕಾಣಿಸಿಕೊಂಡಿದೆ.ಯಡಿಯೂರಪ್ಪ ಈಗ ರಾಜಕೀಯ ಅನಾಥರಾಗಿದ್ದಾರೆ. ಅವರನ್ನು ಬಿಜೆಪಿಯ ವರಿಷ್ಟರು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಒಂದು ರೀತಿಯಲ್ಲಿ ಮಹಾಭಾರತ ಕಥೆಯ ಭೀಷ್ಮರು ಶರಪಂಜರದಲ್ಲಿ ಅಸಹಾಯಕರಾಗಿ ಮಲಗಿದಂತೆ ಇದ್ದಾರೆ. ಅವರನ್ನು ರಕ್ಷಣೆ ಮಾಡಲು ಈಗ ಯಾರೂ ಇಲ್ಲ. ಅದು ಅವರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ನಾನು ಅವರ ಪ್ರೀತಿಯ ಶಿಷ್ಯನಾಗಿ ನೊಂದು ಮಾತನಾಡುತ್ತಿದ್ದೇನೆ. ಈಶ್ವರಪ್ಪನವರ ಹರಿದ ಬಾಯನ್ನು ಹೊಲಿಯಲು ಈಗ ಬಿಜೆಪಿಯಲ್ಲಿ ಯಾರೂ ಇಲ್ಲ ಎಂದರು