ಕೋಳ್ಕೂರ್ ಕುವರಿ ಶ್ರೇಯಾಂಕ್ ಸಾಧನೆಗೆ ಡಾ.ಅಜಯ್ ಸಿಂಗ್ ಸಂತಸ
ಕಲಬುರಗಿ,ಮಾ.19-ತಮ್ಮ ಮತಕ್ಷೇತ್ರವಾಗಿರುವ ಜೇವರ್ಗಿಯ ಕೋಳಕೂರು ಮೂಲದ ಶ್ರೇಯಂಕ್ ಪಾಟೀಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಾಡುತ್ತಿರುವ ಸಾಧನೆ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೋಳಕೂರಿನ ಹಿರಿಯ ಮುಖಂಡರು ಹಾಗೂ ವಕೀಲರಾದ ಅಮೃತಗೌಡ ಪಾಟೀಲರ ಮೊಮ್ಮಗಳಾದ ಶ್ರೇಯಾಂಕಳ ಸಾಧನೆ ಅಪ್ರತಿಮವಾಗಿದೆ. ಶ್ರೇಯಾಂಕ ಆರ್‍ಸಿಬಿ ತಂಡದಲ್ಲಿ ಉತ್ತಮ ಆಟ ಪ್ರದರ್ಶನ ಮಾಡುತ್ತ ದೇಶಕ್ಕೇ ಕೀರ್ತಿ ತಂದಿದ್ದಾರೆ.
ಆರ್‍ಸಿಬಿ ಬೆಂಗಳೂರು ತಂಡ ಹಾಗೂ ಐಪಿಎಲ್‍ನಲ್ಲಿಯೂ ಮತ್ತು ದೇಶದ ಮಹಿಳಾ ಕ್ರಿಕೆಟ್ ತಂಡದಲ್ಲಿಯೂ ಶ್ರೇಯಾಂಕ್ ಪಾಟೀಲ್ ಉತ್ತಮ ಪ್ರದರ್ಶನ ನೀಡುತ್ತ ದೇಶದ ಗಮನ ಸೆಳೆಯುತ್ತಿರೋದು ಖುಷಿಯ ಸಂಗತಿಯಾಗಿದೆ.
ಶ್ರೇಯಾಂಕ್ ಪಾಟೀಲರ ಈ ಸಾಧನೆ ಜೇವರ್ಗಿ ಜನತೆಗೆ ಅಷ್ಟೇ ಅಲ್ಲ, ಇಡೀ ರಾಜ್ಯಕ್ಕೇ, ಇಡೀ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಶ್ರೇಯಾಂಕ್ ಅವರ ತಂದೆ ರಾಜೇಶ ಪಾಟೀಲ್, ಸಹೋದರ ಆದರ್ಶ ಪಾಟೀಲ್ ಇವರೆಲ್ಲರೂ ಕ್ರಿಕೆಟ್ ಆಟಗಾರರಾಗಿದ್ದಾರೆ. ಬಹಳ ವರ್ಷದಿಂದ ಬೆಂಗಳೂರಲ್ಲಿದ್ದರೂ ಕೋಳಕೂರು ಮರೆತಿಲ್ಲ, ಹಾಗೇ ತಮ್ಮ ನಂಟು ಮುಂದುವರಿಸಿರೋದು ಖುಷಿಯ ಸಂಗತಿಯಾಗಿದೆ.
ಕೋಳಕೂರ್ ಪಾಟೀಲರ ಕುಟುಂಬದ ಕ್ರಿಕೆಟ್ ಪ್ರೇಮ ಮೆಚ್ಚುವಂತಹದ್ದಾಗಿದೆ. ಬರುವ ದಿನಗಳಲ್ಲಿ ಶ್ರೇಯಾಂಕ್‍ಳ ಸಾಧನೆ ಮುಗಿಲೆತ್ತರಕ್ಕೇರಲಿ, ಜೇವರ್ಗಿಯ ಕೀರ್ತಿ, ಜೊತೆಗೇ ರಾಜ್ಯ, ದೇಶದ ಕೀರ್ತಿಯೂ ಜಗದಗಲ, ಮುಗಿಲಗಲ ಪಸರಿಸುವಂತಾಗಲಿ ಎಂದು ಕೆಕೆಆರ್‍ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ.ಅಜಯ್ ಸಿಂಗ್ ಶುಭ ಹಾರೈಸಿದ್ದಾರೆ.