ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲೆಂದು ವಿಶೇಷ ಪೂಜೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.19: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಗುರುವಾರ ನಡೆಯಲಿರುವ ಹೃದಯಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ ಹಾಗೂ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಗಣಪತಿ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸಿದರು.
ಈ ಕುರಿತು ತಾಲ್ಲೂಕು ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ಅಧ್ಯಕ್ಷ ಗೌರೀಶ್ ಮಾತನಾಡಿ ಕುಮಾರಣ್ಣ ಕನ್ನಡನಾಡು ಕಂಡ ಅಪರೂಪದ ಮುಖ್ಯಮಂತ್ರಿ, ಅವರ ಜನಪ್ರಿಯ ಕಾರ್ಯಕ್ರಮಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಅವರ ಆಡಳಿತದ ಕಾಲ ಸುವರ್ಣಯುಗವಾಗಿತ್ತು. ಮೂರನೇ ಬಾರಿಗೆ ಹೃದಯದ ಸಂಬಂಧಿ ಚಿಕಿತ್ಸೆಗೆ ತೆರಳುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರಿಗೆ ಕನ್ನಡನಾಡಿನ ಜನರ ಆಶೀರ್ವಾದ ಇರುತ್ತದೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನ ಪರವಾಗಿ ಕಾರ್ಯಕ್ರಮಗಳನ್ನು ನೀಡಿ ಹಾಗೂ ಲಕ್ಷಾಂತರ ಕುಟುಂಬಗಳನ್ನು ಸಂರಕ್ಷಿಸಿದ್ದ ರಕ್ಷಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದಿಗೂ ಸಹ ಪ್ರತಿದಿನ ನೂರಾರು ಮಂದಿ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅವರ ಮನೆ ಬಳಿಗೆ ತೆರಳುತ್ತಿದ್ದು ಅವರೆಲ್ಲರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರುವ ಕುಮಾರಸ್ವಾಮಿಯವರ ಆದರ್ಶ ಗುಣಗಳು ಎಲ್ಲರಿಗೂ ಮೆಚ್ಚುಗೆಯಾಗಿದೆ. ರೈತರ, ಬಡಜನರ, ದೀನದಲಿತರ ಪರವಾಗಿ ಕೆಲಸ ಮಾಡುವ ಕುಮಾರಣ್ಣ ಅವರು ತಮ್ಮ ಆಡಳಿತದ ಅವಧಿಯಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಶಿಕ್ಷಣ, ವಿದ್ಯುತ್, ಲೋಕೋಪಯೋಗಿ, ಆರೋಗ್ಯ, ನೀರಾವರಿ ಯೋಜನೆಗಳಿಗೆ ಸಾಕಷ್ಟು ಹಣ ನೀಡಿ ನಾಡನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದಾರೆ. ಮಾನವೀಯ ಹೃದಯವನ್ನು ಹೊಂದಿರುವ ಏಕೈಕ ಮುಖ್ಯಮಂತ್ರಿ ಆಗಿ ಕರುನಾಡಿನ ಕುಮಾರಣ್ಣ ಹೊರಹಮ್ಮಿದ್ದಾರೆ. ಅವರು ಸೇವೆ ನಾಡಿಗೆ ಇನ್ನೂ ಅಗತ್ಯವಿದೆ ಆದ್ದರಿಂದ ಅವರು ಇದೇ ಗುರುವಾರ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದು ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಹಾಗೂ ಶೀಘ್ರವಾಗಿ ಗುಣಮುಖರಾಗಿ ಮುಂದಿನ ಲೋಕಸಭಾ ಚುನಾವಣೆಗೆ ಅವರ ನೇತೃತ್ವದಲ್ಲಿ ನಾಡಿನ ಜನರ ಮುಂದೆ ತೆರಳಲು ಭಗವಂತನ ಆಶೀರ್ವಾದ ಅವರ ಮೇಲಿರಲಿ ಎಂದು ನಾವುಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ ಎಂದು ಗೌರೀಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕ ಎಚ್.ಡಿ.ದೇವೇಗೌಡ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಚಿಕ್ಕೋನಹಳ್ಳಿ ನಾಗರಾಜು, ಜೆಡಿಎಸ್ ಜಿಲ್ಲಾ ಹಿರಿಯ ಉಪಾದ್ಯಕ್ಷ ಅಗ್ರಹಾರಬಾಚಹಳ್ಳಿನಾಗೇಶ್, ಕುಂದನಹಳ್ಳಿ ಶಿವಕುಮಾರ್, ರೇಣುಕಪ್ಪ, ಕೃಷ್ಣೇಗೌಡ, ಮಂಜೇಗೌಡ ನಂಜುಂಡಪ್ಪ, ಹಿರಿಕಳಲೆಮಂಜೆಗೌಡ, ಸರ್ದಾರ್, ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ಉಪಾದ್ಯಕ್ಷ ಗಾರೆಕುಮಾರ್, ಸೇರಿದಂತೆ ನೂರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.