ವಿಶ್ವಕರ್ಮರು ಶಿಲ್ಪಕಲೆಗಳ ದೇವರು:ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.18: ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ಹಾಗೂ ವಿಶ್ವಕರ್ಮ ಮಹಾಸಭಾ ಸಂಘಟನೆಗಳ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು.
ಶಾಸಕ ಹೆಚ್.ಟಿ.ಮಂಜು ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಶಾಸಕರು ವಿಶ್ವಕರ್ಮರನ್ನು ಶಿಲ್ಪಕಲೆಗಳ ದೇವರು ಎಂದು ಕರೆಯಲಾಗುತ್ತದೆ.
ವಿಶ್ವಕರ್ಮನು ಬ್ರಹ್ಮನ ಪುತ್ರನಾಗಿದ್ದು, ಸತ್ಯ ಯುಗದಲ್ಲಿ ಸ್ವರ್ಗಲೋಕವನ್ನು, ತ್ರೇತಾ ಯುಗದಲ್ಲಿ ಲಂಕೆಯನ್ನು, ದ್ವಾಪರ ಯುಗದಲ್ಲಿ ದ್ವಾರಕೆ ಮತ್ತು ಹಸ್ತಿನಾಪುರವನ್ನು, ಕಲಿಯುಗದಲ್ಲಿ ಇಂದ್ರಪ್ರಸ್ಥವನ್ನು ನಿರ್ಮಿಸಿದ ದೇವರ ಸ್ವರೂಪಿ ವಿಶ್ವಕರ್ಮ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪಟ್ಟಣಗಳು, ದೇವಸ್ಥಾನಗಳಂತಹ ವಿನ್ಯಾಸ ಕಲೆಯ ನಿಪುಣತೆಯನ್ನು ಹೊಂದಿದ್ದ ವಿಶ್ವಕರ್ಮನನ್ನು ವಿಶ್ವದ ಮೊದಲ ಇಂಜಿನಿಯರ್ ಎಂದು ಕರೆಯಲಾಗುತ್ತದೆ. ಇಂತಹ ಪವಿತ್ರ ಸಮುದಾಯವಾಗಿರುವ ವಿಶ್ವಕರ್ಮ ಸಮುದಾಯವು ಸಮಾಜದಲ್ಲಿ ನಾವು ಬಳಸುವ ಬಹುತೇಕ ಎಲ್ಲಾ ವಸ್ತುಗಳನ್ನು ತಯಾರಿಸುವ ಕೌಶಲ್ಯವನ್ನು ಹೊಂದಿದ್ದಾರೆ. ಇಂತಹ ವಿಶ್ವಕರ್ಮ ಸಮುದಾಯವು ಸಂಘಟಿತರಾಗಬೇಕು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ವಿಶ್ವಕರ್ಮ ಜಯಂತಿ ಕುರಿತು ಪ್ರಧಾನ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಅಶೋಕ್, ತಾಲ್ಲೂಕು ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಕುಮಾರಸ್ವಾಮಿ, ತಾಲ್ಲೂಕು ವಿಶ್ವಕರ್ಮ ಮಹಾಸಭಾ ಉಪಾಧ್ಯಕ್ಷ ಎ.ಸಿ.ರೂಪೇಶಾಚಾರ್, ಟಿ.ಎ.ಪಿ.ಸಿ.ಎಂ.ಎಸ್ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಂ, ತಾಲ್ಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಮುಖಂಡರಾದ ಸಾರಂಗಿ ನಾಗಣ್ಣ, ಜಿ.ಎಸ್.ಮಂಜು, ರಮೇಶ್, ಲೋಕೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.