ಜಿಲ್ಲಾ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷ ಡಾ.ವ್ಹಿ ಡಿ ಐಹೊಳ್ಳಿಗೆ ಸನ್ಮಾನ
ವಿಜಯಪುರ,ಮಾ.18: ನಮ್ಮ ಜಿಲ್ಲೆಯ ಹೆಸರಾಂತ ಸಾಹಿತಿ ಡಾ.ವ್ಹಿ.ಡಿ. ಐಹೊಳ್ಳಿ ಅವರು ನಾಡಿನ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ನಮ್ಮ ನಾಡು, ಭಾಷೆಯ ಕೀರ್ತಿಯನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ನಮ್ಮ ಭಾಷೆಯ ಶ್ರೀಮಂತಿಕೆ ಹೆಚ್ಚಲು ಅವರ ಸಾಹಿತ್ಯಿಕ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಅಮರೇಶ ಸಾಲಕ್ಕಿ ಹೇಳಿದರು.
ಡಾ.ವ್ಹಿ ಡಿ ಐಹೊಳ್ಳಿ ಅವರ ಮನೆಯಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯುವ ಘಟಕದ ಗೌರವ ಸಲಹೆಗಾರ ಸಂತೋಷ ಬಂಡೆ ಮಾತನಾಡಿ, ಅನೇಕ ಕೃತಿಗಳನ್ನು ಸಂಪಾದಿಸಿ,ರಚಿಸಿದ ಅನುಭವ ಡಾ.ಐಹೊಳ್ಳಿ ಅವರದು. ಶರಣ ಸಾಹಿತ್ಯ, ಕಥೆ, ಕಾವ್ಯಗಳನ್ನು ಕೂಡ ರಚಿಸಿದ ಅವರು ಪ್ರಸ್ತುತ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಹ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ನಮಗೆಲ್ಲ ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ವತಿಯಿಂದ ಅಧ್ಯಕ್ಷ ಅಮರೇಶ ಸಾಲಕ್ಕಿ, ಗೌರವ ಸಲಹೆಗಾರ ಸಂತೋಷ ಬಂಡೆ ಅವರು ಡಾ. ಐಹೊಳ್ಳಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.