ಕನ್ನಡ ಮನಸ್ಸುಗಳು ಒಗ್ಗಟ್ಟಿನಿಂದ ಕನ್ನಡ ಕಟ್ಟುವ ಕೆಲಸ ಮಾಡಬೇಕಿದೆ : ಗಜಾನನ ಮಂಗಸೂಳಿ
ಅಥಣಿ :ಮಾ.18: ಪ್ರತಿಯೊಬ್ಬರೂ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕು. ಕನ್ನಡ ಮನಸ್ಸುಗಳು ಒಗ್ಗಟ್ಟಿನಿಂದ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಸಮಾಜ ಸೇವಕ ಗಜಾನನ ಮಂಗಸೂಳಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಏಪ್ರಿಲ್ 6 ರಂದು ಜರುಗಲಿರುವ ಗಡಿನಾಡು ಸಾಂಸ್ಕøತಿಕ ಸಂಭ್ರಮದ ಬಿತ್ತಿ ಪತ್ರಗಳನ್ನ ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮ ಭಾಷೆ, ಸಾಹಿತ್ಯ,ಕಲೆ, ಸಂಸ್ಕೃತಿ, ಗಡಿ ನೆಲ, ಜಲ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಚಮಕೇರಿಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಗಡಿನಾಡು ಸಂಸ್ಕೃತಿಕ ಉತ್ಸವ ಸಂಭ್ರಮಕ್ಕೆ ಹಿರಿಯ ಪತ್ರಕರ್ತ, ಸಾಹಿತಿ ಶಿವಪುತ್ರ ಯಾದವಾಡ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವುದು ನಮ್ಮೆಲ್ಲರಿಗೆ ಖುಷಿ ತಂದಿದೆ. ಗಡಿಭಾಗದಲ್ಲಿ ಇಂತಹ ಅನೇಕ ಕನ್ನಡಪರ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಲಿ ಎಂದರು.
ಇದೇ ಸಂದರ್ಭದಲ್ಲಿ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಭ್ರಮದ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಭ್ರಮದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಹಿರಿಯ ಪತ್ರಕರ್ತ ಸಾಹಿತಿ ಶಿವಪುತ್ರ ಯಾದವಾಡ ಅವರನ್ನ ಸನ್ಮಾನಿಸಿ ಆಹ್ವಾನ ನೀಡಲಾಯಿತು.
ಈ ವೇಳೆ ರಂಗಭೂಮಿ ಕಲಾವಿದ ನ್ಯಾಯವಾದಿ ಕೆ. ಎಲ್. ಕುಂದರಗಿ, ಸಾಹಿತಿ ಎಸ್ ಕೆ ಹೊಳೆಪ್ಪನವರ, ಸಿದ್ದಾರ್ಥ ಸಿಂಗೆ, ಜಗನ್ನಾಥ ಭಾಮನೆ, ರೋಹಿಣಿ ಯಾದವಾಡ, ಡಾ.ಪ್ರಿಯವಂದ ಅಣೆಪ್ಪನವರ, ಕವಿತಾ ಪಾಟೀಲ, ಪ್ರೇಮಾ ಪಾಟೀಲ, ಟ್ರಸ್ಟ್ ಅಧ್ಯಕ್ಷ ಮಹಾದೇವ ಬಿರಾದಾರ, ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.