ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಕಾರ್ಲ್ ಮಾಕ್ರ್ಸ್ ಚಿಂತನೆ ಪೂರಕ
ಕಲಬುರಗಿ:ಮಾ.17: ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರ್ಮಿಕ ವರ್ಗ, ಜನ ಸಾಮಾನ್ಯರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡಿ, ಅವರಿಗೆ ದೊರೆಯಬೇಕಾದ ಎಲ್ಲಾ ಹಕ್ಕುಗಳು, ಸೌಕರ್ಯಗಳು ನ್ಯಾಯಯುತವಾಗಿ ಒದಗಿಸಿಕೊಡುವ ಮೂಲಕ ಕಲ್ಯಾಣ ರಾಷ್ಟ್ರ ನಿರ್ಮಾಣಗೊಳಿಸಬಹುದು ಎಂಬ ಕಾರ್ಲ್ ಮಾಕ್ರ್ಸ್‍ರ ಚಿಂತನೆ ಸಾರ್ವಕಾಲಿಕವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಶ್ರೇಷ್ಟ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಕಾರ್ಲ್ ಮಾಕ್ರ್ಸ್‍ರ 141ನೇ ಸಂಸ್ಮರಣಾ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮಾಕ್ರ್ಸ್‍ರ ಚಿಂತನೆಗಳಿಂದ ವಿಶ್ವದ ಶೇ.50ರಷ್ಟು ಭಾಗ ಕ್ರಾಂತಿಯಾಗಿದ್ದು, ರಷ್ಯಾ, ಚೀನಾ, ವಿಯಾಟ್ನಾಂ, ಕ್ಯೂಬಾ ಸೇರಿದಂತೆ ಹಲವಾರು ದೇಶಗಳಲ್ಲಿ ಸಾಕಷ್ಟು ಬದಲಾವಣೆಯಾಯಿತು. ಬಂಡವಾಳಶಾಹಿ ರಾಷ್ಟ್ರಗಳು ಲಾಭದ ಉದ್ದೇಶವನ್ನೇ ಗಮನಿಸದೆ, ಮಾಕ್ರ್ಸ್‍ರ ಸಮಾಜವಾದಿ ಚಿಂತನೆಗಳು ಅಳವಡಿಸಬೇಕಾಗಿದೆ. ಮಾಕ್ರ್ಸ್ ಅವರು ಇಡೀ ತಮ್ಮ ಜೀವನದುದ್ದಕ್ಕೂ ಶ್ರಮಿಕ ವರ್ಗದವರಿಗೆ ನ್ಯಾಯ ಒದಗಿಸಿಕೊಡಲು ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಶಿವಯೋಗೆಪ್ಪಾ ಎಸ್. ಬಿರಾದಾರ, ಪರಮೇಶ್ವರ ಬಿ.ದೇಸಾಯಿ, ವೀರೇಶ ಬೋಳಶೆಟ್ಟಿ ನರೋಣಾ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಮತ್ತಿತರರಿದ್ದರು.