ತಪ್ಪು ತಿಳುವಳಿಕೆ ಇದ್ದಲ್ಲಿ ಶಾಸಕರಲ್ಲಿ ಕ್ಷಮೆಯಾಚಿಸುತ್ತೇನೆ!: ಸಚಿವ ಖೂಬಾ
ಬೀದರ್:ಮಾ.15: ಕ್ಷೇತ್ರದ ಶಾಸಕರು, ಮಾಜಿ ಶಾಸಕರ ಮನೆಗೆ ಹೋಗಿ ಅವರನ್ನು ವಿಶ್ವಾಸ ಪಡೆಯುವ ವಿಶಾಲ ಹೃದಯ ತೋರಿಸುತ್ತೇನೆ. ಸಣ್ಭ ಪುಟ್ಟ ತಪ್ಪು ತಿಳುವಳಿಕೆ ಇದ್ದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ನನ್ನನ್ನು ಕೈಬಿಡಲ್ಲ ಎಂಬ ವಿಶ್ವಾಸ ಅಭ್ಯರ್ಥಿ ಘೋಷಣೆಯಿಂದ ಖಚಿತವಾಗಿದೆ.
ಟಿಕೆಟ್ ಘೋಷಣೆ ನಂತರ ಕ್ಷೇತ್ರದ ಎಲ್ಲ ಶಾಸಕರು, ಮಾಜಿ ಶಾಸಕರನ್ನು ಸಂಪರ್ಕಿಸಿದ್ದು, ಎಲ್ಲರೂ ಸಂತಸವನ್ನು ಹಂಚಿಕೊಂಡಿದ್ದಾರೆ. ಎರಡು ಲಕ್ಷ ಅಂತರದಿಂದ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ತೀವ್ರ ವಿರೋಧದ ನಡುವೆಯೂ ಟಿಕೆಟ್
ಖೂಬಾ ಅವರಿಗೆ ಟಿಕೆಟ್ ನೀಡಲು ಮಾಜಿ ಸಚಿವ ಪ್ರಭು ಚೌಹಾಣ್ ಸೇರಿ ಲೋಕಸಭಾ ವ್ಯಾಪ್ತಿಯ ಬಿಜೆಪಿ ಶಾಸಕರು ಮತ್ತು ಹಲವು ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಖೂಬಾ ಅವರು ಈಗ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿದೆ.
ಸಂಸದರಾಗಿ ಮಾಡುವ ಭರವಸೆ
“ನನ್ನ ಅಭಿವೃದ್ದಿ ಕೆಲಸ, ಪಕ್ಷ ಸಂಘಟನೆ ಮತ್ತು ಜನಾಭಿಪ್ರಾಯಗಳನ್ನು ಗಮನಿಸಿ ಬಿಜೆಪಿ ನನಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಟಿಕೆಟ್ ಘೋಷಣೆ ಬಳಿಕ ಪಕ್ಷದ ಎಲ್ಲಾ ನಾಯಕರು, ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳೊಂದಿಗೆ ದೂರವಾಣಿ ಮೂಲಕ ಮಾತಾಡಿದ್ದೇನೆ. ಎಲ್ಲರೂ ನನ್ನೊಂದಿಗೆ ಚುನಾವಣೆಯಲ್ಲಿ ಮನ:ಪೂರ್ವಕವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮತ್ತು ಕ್ಷೇತ್ರಕ್ಕೆ ನನ್ನನ್ನು ಸಂಸದರಾಗಿ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ” ಎಂದು ಭಗವಂತ ಖೂಬಾ ಹೇಳಿದರು.
ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಚುನಾವಣೆ ಪೂರ್ವ ಟಿಕೆಟ್‍ಗಾಗಿ ಕಾರ್ಯಕರ್ತರಿಂದ ಬೇಡಿಕೆ ಇಡುವುದು ಸಾಮಾನ್ಯ ಪ್ರಕ್ರಿಯೆ. ಇದು ಬಿಜೆಪಿಯಲ್ಲಿನ ಆಂತರಿಕ ಪ್ರಜಾಪ್ರಭುತ್ವ ತೋರಿಸಿಕೊಡುತ್ತೆ. ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ನಾನು ಕಳೆದ ಎರಡು ಚುನಾವಣೆಯಲ್ಲಿ ಗೆದ್ದಿದ್ದೇನೆ. ಮೂರನೇ ಬಾರಿಯೂ ಅತಿ ಹೆಚ್ಚು ಅಂತರದಿಂದ ಗೆಲ್ಲುವ ವಿಶ್ವಾಸ ಇದೆ ಎಂದರು.
ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಗಳಿಗೆ ಜನ ಈಗಾಗಲೆ ರೋಸಿ ಹೋಗಿದ್ದಾರೆ. ದೇಶಕ್ಕೆ ಮೋದಿಜಿಯವರ ಅವಶ್ಯಕತೆ ಎಷ್ಟಿದೆ ಎನ್ನುವುದು ಜನರಿಗೆ ಗೊತ್ತಿದೆ ಹಾಗು ಜನರು ಸಹ ಮೋದಿಜಿಯವರ ಆಡಳಿತದಿಂದ ತುಂಬಾ ಸಂತೋಷವಾಗಿದ್ದಾರೆ. ಹಾಗಾಗಿ ನಾನು ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಬರುತ್ತೇನೆಂಬ ವಿಶ್ವಾಸ ಇದೆ ಎಂದರು.
ಅದ್ದೂರಿ ಸ್ವಾಗತ, ದೇಗುಲಗಳ ಭೇಟಿ
ಮೂರನೇ ಬಾರಿಗೆ ಟಿಕೆಟ್ ಘೋಷಣೆ ಬಳಿಕ ತವರು ಜಿಲ್ಲೆಗೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳು, ನೂತನ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಖಾತೆಯ ಸಚಿವ ಭಗವಂತ ಖೂಬಾ ಅವರನ್ನು ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಮೊದಲಿಗೆ ರೆಜಂತಲ್‍ನ ಸಿದ್ದಿವಿನಾಯಕನ ದರುಶನ ಪಡೆದ ಖೂಬಾ, ಬಳಿಕ ಪಾಪನಾಶ ಲಿಂಗ, ಔರಾದ್‍ನ ಅಮರೇಶ್ವರ ದೇವಸ್ಥಾನ, ತಮ್ಮ ತಾಯಿ ಸ್ವ. ಮಹಾದೇವಿ ಖೂಬಾರವರ ಸಮಾಧಿಗೆ ತೆರಳಿ ದರುಶನ ಮಾಡಿದರು. ತದನಂತರ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಬಿಜೆಪಿಯಿಂದ ಸನ್ಮಾನ ಸ್ವೀಕರಿಸಿದರು. ಕಾರ್ಯಕರ್ತರು, ಬೆಂಬಲಿಗರು ಜಯಘೋಷಗಳ ಮಧ್ಯೆ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೊಮನಾಥ ಪಾಟೀಲ ಮಾತನಾಡಿ, ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ. ಅಭಿವೃದ್ದಿ ಕೆಲಸು ಮಾಡುವವರಿಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತದೆ. ಸಂಸದರಾಗಿ ಖೂಬಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ, ಜತೆಗೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸಂಘಟನೆಯ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಜವಬ್ಧಾರಿಯುತವಾಗಿ ಕೆಲಸ ಮಾಡಿ, ಖೂಬಾ ಅವರ ಹ್ಯಾಟ್ರಿಕ್ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದರು.