ಲಿಂಬೆ ಬೆಳೆಗಳ ರಕ್ಷಣೆಗೆ ಕ್ರಮ: ಶಾಸಕ ಯಶವಂತರಾಯಗೌಡ ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.15 :ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು ಇಂಡಿ ಭಾಗದಲ್ಲಿ ಅತೀ ಹೆಚ್ಚು ಲಿಂಬೆ ಬೆಳೆಗಾರರಿದ್ದಾರೆ. ರೈತರ ಲಿಂಬೆ ಗಿಡಗಳನ್ನು ರಕ್ಷಿಸಲು ನಾವು ಮುಂದಾಗಬೇಕು ಎಂದು ಇಂಡಿ ಶಾಸಕÀ ಯಶವಂತರಾಯಗೌಡ ಪಾಟೀಲ ಹೇಳಿದರು.
ಗುರುವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ನೀರಿನ ಮಟ್ಟ ಕುಸಿದಿದ್ದು ರೈತರು ನೀರಿನ ಅಭಾವದಿಂದ ಲಿಂಬೆ ಬೆಳೆಗಳನ್ನು ರಕ್ಷಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಈ ಭಾಗದ ರೈತರ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರ ನಿಜ ಸ್ಥಿತಿ ಅರಿಯಬೇಕು. ನಿಖರ ಮಾಹಿತಿ ಪಡೆದು ಲಿಂಬೆ ಬೆಳೆ ರಕ್ಷಣೆಗೆ ಮುಂದಾಗಬೇಕು ಅಧಿಕಾರಿಗಳು ಪಡೆದ ಮಾಹಿತಿಯನ್ನು ಲಿಂಬೆ ಅಭಿವೃದ್ಧಿ ಮಂಡಳಿ ವತಿಯಿಂದ ಸರ್ಕಾರಕ್ಕೆ ವರದಿಯನ್ನು ಕಳುಹಿಸಿ ತಕ್ಷಣ ಕ್ರಮ ವಹಿಸುವಂತೆ ಜಿಲ್ಲಾಡಳಿತ ಹಾಗೂ ನಾವುಗಳು ಕೂಡಿ 50 ಲಕ್ಷ ರೂಗಳ ಅನುದಾನ ಬಿಡುಗಡೆಗೆ ಕ್ರಮ ವಹಿಸೋಣ ಎಂದರು.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವುದು ಕಾರಣ. ಈಗಿನಿಂದಲೆ ರೈತರ ಸಹಾಯಕ್ಕೆ ಮುಂದಾಗಬೇಕು. ರೈತರು ಬೆಳೆದ ಲಿಂಬೆ ಬೆಳೆಗಳನ್ನು ಹೇಗಾದರು ಮಾಡಿ ಉಳಿಸಿಕೊಳ್ಳೋಣ. ಒಮ್ಮೆ ಗಿಡ ಒಣಗಿದರೆ ಮತ್ತೆ ಲಿಂಬೆ ಬೆಳೆಯಬೇಕಾದರೆ ಸುಮಾರು 5ರಿಂದ 6 ವರ್ಷಗಳ ಕಾಲ ಕಾಯಬೇಕು. ಲಿಂಬೆ ಬೆಳೆ ಈ ಭಾಗದ ರೈತರ ಜೀವನಾಡಿಯಾಗಿದೆ. ಈ ಭಾಗದ ಲಿಂಬೆ ವಿಶೇಷ ಗುಣಮಟ್ಟ ಹೊಂದಿದ್ದು, ಲಿಂಬೆ ಬೆಳೆಗಾರರಿಗೆ ಒಳ್ಳೆಯ ಮಾರುಕಟ್ಟೆ ಸೌಲಭ್ಯ ಉತ್ತಮ ದರವನ್ನು ಒದಗಿಸಲು ಕ್ರಮ ವಹಿಸಬೇಕು. ಇಂಡಿ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಆದಷ್ಟು ಬೇಗ ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸಭೆಯಲ್ಲಿ ತಿಳಿಸಿದರು.
ಕುಡಿಯುವ ನೀರಿನ ಸಭೆ:
ಜಿಲ್ಲೆಯಲ್ಲಿ ಅತೀ ನೀರಿನ ತೊಂದರೆ ಅನುಭವಿಸುತ್ತಿರುವ ಗ್ರಾಮಗಳಿಗೆ, ಜನ ಜಾನುವಾರುಗಳಿಗೆ ನೀರಿನ ಸೌಲಭ್ಯ ಒದಗಿಸಲು ಪ್ರಥಮ ಆದ್ಯತೆ ನೀಡಬೇಕು. ಕುಡಿಯುವ ನೀರಿನ ವಿಷಯದಲ್ಲಿ ಜಿಲ್ಲಾಡಳಿತವು ತಮ್ಮದೇ ಆದ ನಿರ್ಣಯಗಳನ್ನು ಪಾಲಿಸಬೇಕು. ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ಕಟ್ಟ ಕಡೆಯ ವ್ಯಕ್ತಿಗೂ ನೀರು ದೊರಕಿಸಿ ಕೊಡುವಂತೆ ಕ್ರಮ ವಹಿಸಬೇಕು. ತಡವಲಗ, ಅಥರ್ಗಾ ಹಾಗೂ ನಿಂಬಾಳ ಕೆರೆಗಳಿಗೆ ನೀರು ಹರಿಸಿದಲ್ಲಿ ಈ ಭಾಗದ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ನಾಗಠಾಣ ಮತಕ್ಷೇತ್ರದ ಶಾಸಕÀ ವಿಠ್ಠಲ ಕಟಕದೊಂಡ ಮಾತನಾಡಿ, ನಾಗಠಾಣ ಹಾಗೂ ಜಂಬಗಿ ಕೆರೆಗಳಿಗೆ ನೀರು ಹರಿಸಿದರೆ ಈ ಭಾಗದ ಜನ- ಜಾನುವಾರಗಳಿಗೆ ನೀರಿನ ತೊಂದರೆ ನೀಗಿಸಬಹುದಾಗಿದೆ. ಅಧಿಕಾರಿಗಳು ಕ್ರಮ ವಹಿಸುವಂತೆ ಕೋರಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಈಗಾಗಲೇ ಕುಡಿಯುವ ನೀರಿನ ಕುರಿತು ಸಾಕಷ್ಟು ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತೀ ತೊಂದರೆಗೊಳಗಾದ ಗ್ರಾಮಗಳಿಗೆ ಟ್ಯಾಂಕರ್Àಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ಹೆಚ್ಚಿನ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆÉ, ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ರೈತರು ಹಾಗೂ ಇತರರು ಉಪಸ್ಥಿತರಿದ್ದರು.