ಗ್ಯಾರಂಟಿ ಸಮಾವೇಶವನ್ನು ಯಶಸ್ವಿಗೊಳಿಸಿ: ಮರೀಗೌಡ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.14:- ಮೈಸೂರಿನಲ್ಲಿ ಇದೇ ತಿಂಗಳು 15ರಂದು ಶುಕ್ರವಾರ ನಡೆಯುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸಮಾವೇಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಹಿಳೆಯರು ಬಂದು ಯಶಸ್ವಿಗೊಳಿಸಬೇಕೆಂದು ಮೂಡಾ ಅಧ್ಯಕ್ಷ ಕೆ.ಮರೀಗೌಡ ಮನವಿ ಮಾಡಿದರು.
ನಗರದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಗ್ಯಾರಂಟಿ ಪೂರ್ವ ಭಾವಿ ಸಭೆ ಹಾಗೂ ಇಲವಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷೆ ಭಾಗ್ಯಲೋಕೆಶ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಚಾಮುಂಡೇಶ್ವರಿ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನನ್ನ ಮೇಲೆ ವಿಶ್ವಾಸವಿಟ್ಟು ಮೂಡಾ ಅಧ್ಯಕ್ಷಸ್ಥಾನ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಹಾಗೂ ಕ್ಷೇತ್ರದ ಜನತೆಯ ಹೆಸರಿಗೆ ಚ್ಯುತಿ ಬಾರದಂತೆ ಕೆಲಸ ಮಾಡುವೆ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಅಂಬೇಡ್ಕರ್ ರವರ ಸಂವಿಧಾನದ ಆಶಯದಂತೆ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ಜಾತಿ, ಭೇದವಿಲ್ಲದೆ ಜಾರಿಗೆ ತಂದಿದ್ದರಿಂದ ಇಂದು ರಾಜ್ಯದ ಮಹಿಳೆಯರು ಬಡವರು ನೆಮ್ಮದಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಬೇಕು.
ಕೇಂದ್ರ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಾ ದಿನನಿತ್ಯ ವಸ್ತುಗಳ ಬೆಲೆಗಳನ್ನು ಏರಿಸುತ್ತಾ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಎಂದು ಪ್ರಶ್ನಿಸಿದ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲಲ್ಲಿದ್ದು. ಗೆಲುವು ಮೈಸೂರಿನಿಂದಲೇ ಪ್ರಾರಂಭವಾಗಬೇಕು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು, 1983 ರಿಂದಲೂ ಸಿದ್ದರಾಮಯ್ಯರವರ ಬೆಂಬಲಕ್ಕೆ ನಿಂತ ನೀವು 341 ಭೂತಗಳ ಕಾರ್ಯಕರ್ತರು, ಮುಖಂಡರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗ್ಯಾರಂಟಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ್‍ಕುಮಾರ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ ಟಿ.ಕೆ, ನಗರ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಕೆಪಿಸಿಸಿ ಸದಸ್ಯರಾದ ನರಸೇಗೌಡ, ನಾಗವಾಲ, ನರೇಂದ್ರ, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಮೋದಾಮಣಿ, ಜಿ.ಪಂ.ಮಾಜಿ ಸದಸ್ಯರಾದ ಲೇಖಾ ವೆಂಕಟೇಶ್, ಕೂರ್ಗಳ್ಳಿ ಮಹಾದೇವ, ಉದ್ಯಮಿ, ಗಂಧನಹಳ್ಳಿ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ಶಿವಣ್ಣ, ಹಿನಕಲ್ ಹೊನ್ನಪ್ಪ, ಮಾರ್ಬಳ್ಳಿ ಕುಮಾರ್, ನಾಗರತ್ನ, ಹರೀಶ್ ಮೊಗಣ್ಣ, ಕೃಷ್ಣಕುಮಾರ ಸಾಗರ್, ಪೆÇ್ರ. ಶಿವಕುಮಾರ್, ಶಿವ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಗುರುಸ್ವಾಮಿ, ಜೆ. ಸತೀಶ್‍ಕುಮಾರ್, ಜವರೇಗೌಡ, ಕೆಂಚಪ್ಪ, ರವಿ ಚಂದ್ರು, ಬಸವರಾಜು, ಆನಂದೂರು ರಾಮೇಗೌಡ, ಮೂರ್ತಿ, ಮಹದೇವ ಹಾಜರಿದ್ದರು.