ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಇತಿಹಾಸ ಸೃಷ್ಟಿ ಆಗಲಿ: ಶಾಸಕ ಯತ್ನಾಳ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.12: ಜೂನ್ ನಂತರ ಸರ್ಕಾರಿ ಶಾಲೆಗಳ ಪ್ರವೇಶ ದಾಖಲಾತಿಯಲ್ಲಿ ವಿಜಯಪುರ ನಗರ ಇತಿಹಾಸ ಸೃಷ್ಟಿಸುವಂತಾಗಬೇಕು ಎಂದು ನಗರ ಶಾಸಕÀ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ವಾರ್ಡ ನಂ.13ರಲ್ಲಿ ಬರುವ ಶಾಪೇಟೆ ಸರ್ಕಾರಿ ಕೆಬಿಎಸ್ ನಂ.7 ಮತ್ತು 8 ರಲ್ಲಿ ವಿವೇಕ ಶಾಲಾ ಕೊಠಡಿ ಯೋಜನೆಯಡಿ ನೂತನವಾಗಿ ನಿರ್ಮಾಣ ಮಾಡಲಾದ 4 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಸರ್ಕಾರಿ ಶಾಲೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಕ್ಕಳ ಪ್ರವೇಶ ಆಗುತ್ತಿದೆ ಎಂಬ ಸಂದೇಶ ಇಡೀ ರಾಜ್ಯಕ್ಕೆ ಹೋಗುವ ರೀತಿಯಲ್ಲಿ, ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಅತ್ಯುತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮಾಡೋಣ, ಬಡವರು, ಶ್ರೀಮಂತರು ಎನ್ನದೇ, ಎಲ್ಲಾ ಮಕ್ಕಳು ಸಹ ನಮ್ಮ ಸರ್ಕಾರಿ ಶಾಲೆಗಳಿಗೆ ಪ್ರವೇಶಕ್ಕೆ ಕ್ಯೂ ನಿಲ್ಲಬೇಕು ಎಂದರು.
ಈಗಾಗಲೇ ನಗರದ ಬಹುತೇಕ ಸರ್ಕಾರಿ ಶಾಲೆಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಉಳಿದಿರುವ ಶಾಲೆಗಳ ಶಿಥಿಲ ಕೊಠಡಿಗಳನ್ನು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತೆರವುಗೊಳಿಸಿ, ಮರು ನಿರ್ಮಾಣ ಮಾಡಲಾಗುವುದು. ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲು, ಶಿಕ್ಷಣ ಇಲಾಖೆ ಜೊತೆಗೆ ತಾವು ಸದಾಸಿದ್ಧ ಎಂದು ಭರವಸೆ ನೀಡಿದರು.
ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ವಿಜಯಪುರ ನಗರ ಮಾದರಿ ಆಗಿದೆ. ಕೊರೋನಾ ಸಂದರ್ಭದಲ್ಲಿ ಲಸಿಕಾರಣದಲ್ಲಿಯೂ ವಿಜಯಪುರ ನಗರ ನಂಬರ್ ಒನ್ ಸ್ಥಾನದಲ್ಲಿತ್ತು. ರಸ್ತೆಗಳು, ಸ್ಲಂ ಅಭಿವೃದ್ಧಿ, ಬಡವರಿಗೆ ಸ್ವಂತ ಸೂರು ಹೀಗೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿರುವ ತೃಪ್ತಿಯಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ವಿಠ್ಠಲ ಹೊಸಪೇಟ, ಮುಖಂಡರಾದ ರಾಜೇಶ ದೇವಗಿರಿ, ಎಂ.ಎಂ.ಸಜ್ಜನ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಎಸ್,ಡಿ.ಎಂಸಿ ಅಧ್ಯಕ್ಷ ಗುರಪ್ಪ ಕನ್ನೂರ ಸೇರಿದಂತೆ ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮಕ್ಕಳು ಮತ್ತಿತರರು ಇದ್ದರು.