ಆನೆಗೊಂದಿ ಉತ್ಸವದಲ್ಲಿ ಮಹಿಳಾಗೋಷ್ಠಿಗೆ ಕೊಕ್: ಲೇಖಕಿಯರು ಗರಂ..!ಅರ್ಧ ಗಂಟೆ ಮಹಿಳಾಗೋಷ್ಠಿಗೆ ಡಿಸಿ ನಳೀನ್ ಅತುಲ್ ಭರವಸೆ
ಗಂಗಾವತಿ, ಮಾ,11: ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ಬಾರಿ ನಡೆಯುವ ಆನೆಗೊಂದಿ ಉತ್ಸವದಲ್ಲಿ ಮಹಿಳಾ ವಿಷಯ ಕುರಿತಂತೆ ಒಂದು ಗೊಷ್ಠಿಯನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿಯ ಆನೆಗೊಂದಿ ಉತ್ಸವದಲ್ಲಿ ಮಹಿಳಾ ಗೋಷ್ಠಿ ಕೈ ಬಿಟ್ಟಿರುವುದಕ್ಕೆ ಕೊಪ್ಪಳ ಜಿಲ್ಲೆಯ ಸಾಹಿತ್ಯಾಸಕ್ತ ಲೇಖಕಿಯರು ಆನೆಗೊಂದಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಳೀನ ಅತುಲ್ ಮುಂದೆ ತಮ್ಮ ಅಸಮಾಧಾನ ತೋಡಿಕೊಂಡ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಒಂದು ನೂರಕ್ಕೂ ಹೆಚ್ಚು ಜನ ಮಹಿಳೆಯರು ಬರವಣಿಗೆಯಲ್ಲಿ ತೊಡಗಿಕೊಂಡಿರುವುದು ಮಹಿಳಾ ಅಸ್ಮಿತೆಯ ಹೆಗ್ಗುರುತೆಂದೆ ಭಾವಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಹೀಗಿದ್ದಾಗಲೂ ಮಹಿಳಾ ಸಂವೇದನೆಯ ಕುರಿತು ಚರ್ಚೆಗಳು ಹಿಂದಿಗಿಂತಲೂ ವರ್ತಮಾನದಲ್ಲಿ ತುಂಬಾ ಅಗತ್ಯವಿದೆ. ಮಹಿಳೆಯನ್ನು ಒಂದು ಜ್ಞಾನಶೀಸ್ತನ್ನಾಗಿ ಪರಿಭಾವಿಸಿರುವ ಸಂದರ್ಭದಲ್ಲೂ ಲಿಂಗತಾರತಮ್ಯದ ನೆಲೆಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಹೋಗದಿರುವುದನ್ನು ಕಾಣುತ್ತೇವೆ. ಆದ್ದರಿಂದ ಉತ್ಸವಗಳಲ್ಲಿ ವಿದ್ವಾಂಸರು, ಜನಸಾಮಾನ್ಯರು ಒಂದೇ ವೇದಿಕೆಯಡಿ ಇರುವುದರಿಂದ ಮಹಿಳೆಯ ಬಗೆಗಿನ ಅರಿವು, ತಿಳುವಳಿಕೆಗಳು, ಹೆಣ್ಣಿನ ಬಗೆಗಿನ ಗ್ರಹಿಕೆಗಳ ಚರ್ಚೆ ಆಗಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿದ್ದಾಗ್ಯೂ ಆನೆಗೊಂದಿ ಉತ್ಸವದಲ್ಲಿ ಮಹಿಳಾಗೊಷ್ಠಿ ಕೈಬಿಟ್ಟಿರುವುದು ಕೊಪ್ಪಳ ಜಿಲ್ಲೆಯ ಲೇಖಕಿಯರಿಗೆ ತುಂಬಾ ಅಸಮಾಧಾನವಾಗಿದೆ. ಎಂದು ಲೇಖಕಿಯರ ಸಂಘ ಭಾನುವಾರ ಜಿಲ್ಲಾಧಿಕಾರಿಗಳಿಗೆ ಲಿಖಿತ ಪತ್ದ ನೀಡಿ ಗಮನ ಸೆಳೆದರು .
ಇನ್ನು ಆನೆಗೊಂದಿ ಉತ್ಸವದಲ್ಲಿ ಮಹಿಳಾ ಗೋಷ್ಠಿ ಆಯೋಜಿಸಿ ಮಹಿಳಾ ಬರಹಗಾರ್ತಿಯರಿಗೆ ಆಧ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸ್ವಿಕರೀಸಿದ ಡಿಸಿ ನಳೀನ ಅತುಲ್ ಅರ್ದ ಗಂಟೆ ಮಹಿಳಾ ಗೋಷ್ಠಿ ನಡೆಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಮುಮ್ತಾಜ್ ಬೇಗಂ, ಪದಾಧಿಕಾರಿಗಳಾದ ಸೋಮಕ್ಕ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ, ಗಂಗಾವತಿ ತಾಲ್ಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಇತರರು ಇದ್ದರು.