ರಾಷ್ಟ್ರೀಯ ಆವಿಷ್ಕಾರ ಅಭಿಯಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ

ಸಂಜೆವಾಣಿ ವಾರ್ತೆ
ಹೊಸನಗರ.ಮಾ.೧೦ : ರಾಜ್ಯ ಶಿಕ್ಷಣ ಇಲಾಖೆಯು ’ರಾಷ್ಟೀಯ ಆವಿಷ್ಕಾರ ಅಭಿಯಾನ’ ಕಾರ್ಯಕ್ರಮದಡಿಯಲ್ಲಿ ಶಾಲಾ ಹಂತದಿಂದ ರಾಜ್ಯಮಟ್ಟದವರೆಗೂ ನಡೆಸುವ ರಸಪ್ರಶ್ನೆ ಕಾರ್ಯಕ್ರಮದ ಜ್ಯೂನಿಯರ್‌ ವಿಭಾಗದಲ್ಲಿ ಕಡಸೂರು ನಾಗರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಕುಮಾರಿ ಕವನ ಎಸ್‌.ಕೆ, ಬೆಂಗಳೂರಿನಲ್ಲಿ ನಡೆದ ವಿಭಾಗ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ತಾಲ್ಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.ರಾಷ್ಟೀಯ ಆವಿಷ್ಕಾರ ಅಭಿಯಾನ’ ಕಾರ್ಯಕ್ರಮದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕವನ ತಾಲ್ಲೂಕು ಮಟ್ಟದ ಆನ್ಲೈನ್ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಮುಖಾಮುಖಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಬೆಂಗಳೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಳು. ವಿಭಾಗ ಮಟ್ಟದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದ ಕವನ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ಸ್ಫೂರ್ತಿಯಾಗಿದ್ದಾಳೆ. ಇವಳ ಸಾಧನೆಗೆ ಹೊಸನಗರ ತಾಲ್ಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಸಿಬ್ಬಂದಿ ವರ್ಗ, ಎಸ್‌ಡಿಎಂಸಿ, ಗ್ರಾಮ ಪಂಚಾಯ್ತಿ ಹುಂಚ, ಪೋಷಕರು, ಅಡುಗೆ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.