ಬಿದರಿ ಅಶ್ವಿನಿ ಆಸ್ಪತ್ರೆಯಲ್ಲಿ ಶ್ರವಣ ದೋಷ ತಪಾಸಣೆ ಶಿಬಿರ
ವಿಜಯಪುರ, ಮಾ.9:ವಿಶ್ವ ಶ್ರವಣ ದಿನದ ಅಂಗವಾಗಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಸುಭಾಸ ಬಿದರಿ ಮೆಮೋರಿಯಲ್ ಬೈಲ್ ಡೆವಲಪ್‍ಮೆಂಟ್ ಸೆಂಟರ್ ಆಶ್ರಯದಲ್ಲಿ ದಮಾ. 5 ರಿಂದ ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆಯ 4ನೇ ಮಹಡಿಯಲ್ಲಿ ನಡೆದ ಎರಡು ದಿನಗಳ ಶಿಬಿರದಲ್ಲಿ ಸುಮಾರು 35 ಜನರ (ಮಕ್ಕಳು ಹಾಗೂ ವಯಸ್ಕರು ಸೇರಿದಂತೆ) ಶ್ರವಣ ದೋಷ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದರ ಜೊತೆಗೆ ಮಕ್ಕಳಿಗಾಗಿ ಮಾತಿನ ಅಸ್ವಸ್ಥತೆಯನ್ನು ಕೂಡಾ ಪರೀಕ್ಷಿಸಲಾಯಿತು. ಅವರಲ್ಲಿ 8 ಮಕ್ಕಳಿಗೆ ಎರಡೂ ಕಿವಿಗಳಿಗೆ (ದ್ವಿಪಕ್ಷೀಯ) ಶ್ರವಣ ಸಾಧನಗಳು ಬೇಕಾಗಿದ್ದು, ಇದು ಅವರ ಶಿಕ್ಷಣ ಮತ್ತು ಭಾಷಾ ಕಲಿಕೆಗೆ ಮುಖ್ಯವಾಗಿದೆ. ಇದರ ಜೊತೆಗೆ 20 ವಯಸ್ಕರಿಗೆ ಏಕಪಕ್ಷೀಯ ಶ್ರವಣ ಸಾಧನವನ್ನು ಒದಗಿಸಲು ನಿರ್ಧರಿಸಲಾಗಿದ್ದು, ಒಟ್ಟಾರೆ 36 ಶ್ರವಣ ಸಾಧನಗಳು ಬೇಕಾಗಿದ್ದು, ಇದರ ಜವಾಬ್ದಾರಿಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವಹಿಸಿಕೊಂಡಿದೆ. ಡಿಜಿಟಲ್ ಶ್ರವಣ ಸಾಧನಗಳು ಉತ್ತಮ ಮಾತಿನ ಸ್ಪಷ್ಟತೆ ಮತ್ತು ಬಾಳಿಕೆಯನ್ನು ಒದಗಿಸುವುದರಿಂದ ಸ್ಟಾರ್‍ಕೀ ಕಂಪನಿಯ “ನ್ಯೂಸ್ ಐಕ್ಯೂ 1000” ಶ್ರವಣ ಸಾಧನಗಳನ್ನು ಫಲಾನುಭವಿಗಳಿಗೆ ಒದಗಿಸಲು ನಿರ್ಧರಿಸಲಾಗಿದೆ. ಈ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಅವರು ಮಾತನಾಡಿ, ಈ ಸೌಲಭ್ಯ ಕರ್ನಾಟಕದಲ್ಲಿ ಕೇವಲ ಬೆಂಗಳೂರು ಮತ್ತು ಮಂಗಳೂರು ನಗರಗಳಲ್ಲಿ ಮಾತ್ರ ಇದ್ದು, ಶ್ರವಣ ದೋಷದಿಂದ ಬಳಲುತ್ತಿರುವ ಉತ್ತರ ಕರ್ನಾಟಕದ ಮಕ್ಕಳು ಮತ್ತು ವಯಸ್ಕರು ವಿಜಯಪುರದ ಡಾ|.ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿರುವ “ಮಕ್ಕಳ ಸರ್ವತೋಮುಖ ಬೆಳವಣಿಗೆ” ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಹಾಗೂ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು. ಸಮಾರೋಪ ಸಮಾರಂಭದಲ್ಲಿ ಡಾ.ಎಲ್.ಎಚ್. ಬಿದರಿ, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಚೇರಮನ್ ಶರದ ರೊಡಗಿ, ಕಾರ್ಯದರ್ಶಿ ಮುರನಾಳ, ಲೆಂಡೆ, ಪ್ರಕಾಶ ಮಠ ಹಾಗೂ ವಾಕ್ ಶ್ರವಣ ತಜ್ಞೆ ವರಲಕ್ಷ್ಮೀ ಹಾಗೂ ಇನ್ನಿತರರು ಉಪಸ್ಥಿತರಿದ್ದರು.