ಮಹಿಳೆಯರಿಗೆ ತಪ್ಪದ ಶೋಷಣೆ : ಡಾ. ಕೋಳೆಕರ
ಇಂಡಿ:ಮಾ.9:ಮಹಿಳೆಯರು ರಾಜಕೀಯ, ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಹೊಂದಿ ಅವರೂ ಗೌರವದ ಬದುಕು ನಡೆಸುವ ಅವಕಾಶ ಪಡೆದುಕೊಂಡರೂ ಕೆಲವೆಡೆ ಶೋಷಣೆ ಮಾತ್ರ ಇನ್ನೂ ನಿಂತಿಲ್ಲ ಎಂದು ಸರಕಾರಿ ಆಸ್ಪತ್ರೆಯ ವೈದ್ಯೆ ಡಾ|| ಪ್ರೀತಿ ಕೋಳೆಕರ ವಿಷಾಧಿಸಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯಲ್ಲಿ ಮಹಿಳಾ ದಿನಾಚರಣೆ ಮತ್ತು 88 ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬ್ರಹ್ಮ ಕುಮಾರಿ ಮುಖ್ಯಸ್ಥೆ ಬಿ.ಕೆ.ಯಮುನಾ ಅಕ್ಕನವರು ಮಾತನಾಡಿ ನಮ್ಮ ಜನಸಂಖ್ಯೆಯಲ್ಲಿ ಶೇ 50 ರಷ್ಟು ಮಹಿಳೆಯರಿದ್ದರೂ ಕೆಲವು ಕಡೆ ಅವರ ದುಡಿಮೆಗೆ ಮನ್ನಣೆ ಸಿಗುತ್ತಿಲ್ಲ. ಅದರಲ್ಲೂ ಪ.ಜಾತಿ, ಪ. ಪಂಗಡ ಮಹಿಳೆಯರಲ್ಲಿ ಅಪಾರ ಪ್ರತಿಭೆ ಮತ್ತು ಕೌಶಲಗಳಿವೆ. ಆದರೆ ಒಟ್ಟು ಸ್ತ್ರೀಯರ ಪೈಕಿ ಶೇ 5 ರಿಂದ 10 ರಷ್ಟು ಮಂದಿ ಮಾತ್ರ ಅರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಹೆಣ್ಣುಮಕ್ಕಳ ದುಡಿಮೆಗೆ ನೆಲೆ ಬೆಲೆಗಳು ಸಿಕ್ಕರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ದಿ ಸಾದ್ಯವಾಗುತ್ತದೆ ಎಂದರು.
ಕದಳಿ ವೇದಿಕೆ ಉಪಾಧ್ಯಕ್ಷ ರಾಜೇಶ್ವರಿ ಕ್ಷತ್ರಿಯವರು ಮಾತನಾಡಿ ಮಹಿಳೆಯರು ಇಂದು ರಾಷ್ಟ್ರಪತಿ ಹುದ್ದೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತಿರುವದು ಶ್ಲಾಘನೀಯ ಎಂದರು.
ಅಹಿರಸಂಗದ ರೇವಣಸಿದ್ದ ಶಾಸ್ತ್ರೀಗಳು ಮತ್ತು ಶ್ರೀದೇವಿ ಅಕ್ಕನವರು, ಬಿ.ಕೆ.ಶಾಂತಾ ಅಕ್ಕನವರು ಶಿವರಾತ್ರಿ ಜಾಗರಣೆ ಮತ್ತು ಮಹತ್ವ ಕುರಿತು ಮತ್ತು ಇಂಡಿ ಸೇವಾ ಕೇಂದ್ರದ ಕುರಿತು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ, ರಾಜೇಶ್ವರಿ ಕೋಳೆಕರ, ಆರ್.ಪಿ.ಗುರವ, ಬಿ.ಎಚ್.ಪೋಲಿಸಪಾಟೀಲ, ಶಿವಲಿಂಗಪ್ಪ ಪಟ್ಟದಕಲ್ಲ ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಎಂ.ಜೆ.ಪಾಟೀಲ, ದಯಾನಂದ ಸುರಪುರ, ಎಸ್.ಬಿ.ಬಿರಾದಾರ, ,ಶರಣ ಬಸವ ಪೋಲಿಸ ಪಾಟೀಲ ಮತ್ತಿತರಿದ್ದರು.