ಲಿಂಗಸಮಾನತೆಯು ದೇಶದ ಅಭಿವೃದ್ಧಿಯ ತಳಹದಿ – ಚಂದ್ರಶೇಖರ್ ಶೃಂಗೇರಿ

ಸಂಜೆವಾಣಿ ವಾರ್ತೆ
ಶಿವಮೊಗ್ಗ.ಮಾ.೮ : ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನಶಾಸ್ತ್ರ ವಿಭಾಗ, ಮಾನಸಾಧಾರ ಪುನರ್ವಸತಿ ಕೇಂದ್ರ  ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ   ಪತ್ರಕರ್ತರಾದ ಚಂದ್ರಶೇಖರ್ ಶೃಂಗೇರಿ ಮಾತನಾಡಿ “ಲಿಂಗ ಸಮಾನತೆಯನ್ನು ಸಾಧಿಸುವುದು ದೇಶದ ಅಭಿವೃದ್ಧಿಯ ಮುಖ್ಯ ತಳಹದಿ, ಲಿಂಗ ಅಸಮಾನತೆ ಎಂಬುದು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಡೆತಡೆ, ಸಮಾನತೆಯನ್ನು ಸಾಧಿಸಲು ನಾವೆಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಡಯಾಗ್ನೋಸ್ಟಿಕ್‌ನ ಡಾ.ಕೌಸ್ತುಭ ಮಹಿಳೆ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ಮಾಹಿತಿಯನ್ನು ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದವನ್ನು ನಡೆಸಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ತಳಮಟ್ಟದಲ್ಲಿ ಸಾಧನೆಯನ್ನು ಮಾಡಿರುವ 5 ಜನರನ್ನು ಗುರುತಿಸಿ ಸನ್ಮಾನಿಸಲಾಯಿತು.ಮಾನಸಾಧಾರದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ಆರೋಗ್ಯ ಸೇವಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಜಯಮ್ಮ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿ ನಿಲಯದ ವಾರ್ಡನ್ ಶ್ರೀಮತಿ ಧನಲಕ್ಷ್ಮಿ, ಹಿರಿಯ ಪೌರ ಕಾರ್ಮಿಕ ಸಹಾಯಕಿ ಶ್ರೀಮತಿ ವೆಂಕಟಮ್ಮ, ಗೃಹ ಉದ್ಯಮಿ ಶ್ರೀಮತಿ ನಾಗಲಕ್ಷ್ಮಿ ಹಾಗೂ ಸ್ಪೀಕ್ ಫಾರ್ ಇಂಡಿಯಾ ಚರ್ಚಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಥಮ ವರ್ಷದ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿನಿ ಕು.ಸ್ಪೂರ್ತಿ ವೈ.ಹೆಚ್ ರವರನ್ನು ಮಾನಸ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ.ಎ.ಪೈ ಸನ್ಮಾನಿಸಿದರು. ಎಲ್ಲ ಸನ್ಮಾನಿತರು ಜೀವನದಲ್ಲಿ ತಾವು ಸ್ವಾವಲಂಬಿಗಳಾಗಿ ಗೌರವದಿಂದ ಬಾಳಲು ತಮ್ಮ ಆತ್ಮಸ್ಥೈರ್ಯ ಹಾಗೂ ಕುಟುಂಬದ ಬೆಂಬಲ ಕಾರಣ ಎಂದು ತಮ್ಮ ಅನಿಸಿಕೆಯನ್ನು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ವರ್ಷದ ಘೋಷ ವಾಕ್ಯದಂತೆ ದೇಶದ ಪ್ರಗತಿಗಾಗಿ ಮಹಿಳೆಯರ ಅಭಿವೃದ್ಧಿಗೆ ಹೂಡಿಕೆ ಮಾಡುವುದು ಅಗತ್ಯ ಹಾಗೂ ಅನಿವಾರ್ಯ ಎಂದರು. ಇಂತಹ ಹೂಡಿಕೆ ಮಾನಸಿಕ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳೆಲ್ಲವನ್ನು ಒಳಗೊಂಡಿದೆ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅರ್ಚನಾ ಭಟ್, ಮಾನಸಾಧಾರ ಪುನಃಶ್ಚೇತನ ಕೇಂದ್ರದ ಮನೋವೈದ್ಯರಾದ ಡಾ.ಪ್ರವೀಣ್, ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ಸ್ವಾಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು.ಬಿಂದು ಕಾರ್ಯಕ್ರಮ ನಿರೂಪಿಸಿ, ಸುಮಂತ್ ಸ್ವಾಗತಿಸಿ, ಕೀರ್ತನಾ ವಂದಿಸಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಲ್ಲಾ ವಿದ್ಯಾರ್ಥಿಗಳೊಂದಿಗೆ ಮಾನಸಾಧಾರ ಪುನಃಶ್ಚೇತನ ಕೇಂದ್ರದ ಮಹಿಳಾ ನಿಲಯ ವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅರ್ಥಪೂರ್ಣವಾಗಿತ್ತು.