ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು; ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
ಮಂಗಳೂರು-ಸುರತ್ಕಲ್‌ನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಸುರತ್ಕಲ್‌ನ ಪ್ರಗತಿನಗರದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಚಿಕ್ಕಬಳ್ಳಾಪುರ ಮೂಲದ ಮೋಹನ್ ಕುಮಾರ್ ಮೇಟಿ (೨೨) ಮೃತ ಯುವಕ.
ಸೆ. ೧೨ರಂದು ಮೋಹನ್ ಕುಮಾರ್ ಮೇಟಿ ಅವರ ತಾಯಿ ಆತನಿಗೆ ಕರೆ ಮಾಡಿದ್ದರು. ಮೋಹನ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಮೋಹನ್ ಕರೆ ಸ್ವೀಕರಿಸದ ಕಾರಣ, ಅವರ ತಾಯಿ ಗಾಬರಿಗೊಂಡು, ಆತ ವಾಸಿಸುತ್ತಿದ್ದ ನಿವಾಸವನ್ನು ಪರಿಶೀಲಿಸಲು ಮನೆಯ ಮಾಲೀಕರ ಬಳಿ ಕೇಳಿಕೊಂಡಿದ್ದಾರೆ. ಅದರಂತೆ ಮನೆ ಮಾಲೀಕರು ಬಾಡಿಗೆ ಮನೆ ಬಳಿ ಹೋಗಿ ನೋಡಿದಾಗ ಮೋಹನ್ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು, ದೇಹ ಬಹುತೇಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಮೃತ ಯುವಕನ ಪೋಷಕರು ಸೆ. ೧೬ರಂದು ನಗರಕ್ಕೆ ಆಗಮಿಸಿ ಅಂತಿಮ ವಿಧಿವಿಧಾನಕ್ಕಾಗಿ ಅವರ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ದಿದ್ದಾರೆ. ಈ ಘಟನೆ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.