ರಂಜಾನ್ ಹಿನ್ನೆಲೆ; ನಗರದಾದ್ಯಂತ ಸ್ವಚ್ಛತೆಗೆ ಕನೀಜ್ ಫಾತಿಮಾ ಸೂಚನೆ
ಕಲಬುರಗಿ,ಮಾ.7: ಮುಂಬರುವ ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಕಲಬುರಗಿ ನಗರದಾದ್ಯಂತ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷೆ ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ ಅವರು ಸೂಚನೆ ನೀಡಿದರು.
ನಗರದ ಐವಾನ್‍ಎಶಾಹಿ ಅತಿಥಿಗೃಹದಲ್ಲಿ ಮಹಾನಗರ ಪಾಲಿಕೆ, ಆಹಾರ, ಜೆಸ್ಕಾಂ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ದಿನ ಬಿಟ್ಟು ದಿನ ರಸ್ತೆ ಸೇರಿದಂತೆ ಪ್ರಮುಖ ಸ್ಥಳದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಮೂಲಕ ಸೊಳ್ಳೆಗಳಿಗೆ ನಿಯಂತ್ರಣ ಹೇರಿ ಉತ್ತಮ ಪರಿಸರ ಕಾಪಾಡಬೇಕು ಎಂದರು.
ಹಬ್ಬದ ಮುನ್ನವೆ ಪಡಿತರ ವಿತರಣೆ ಆಗುವಂತೆ ಆಹಾರ ಇಲಾಖೆ ಕ್ರಮ ವಹಿಸಬೇಕು. ಈ ಸಂಬಂಧ ಗೋಡೌನ್ ವೇರ್ ಹೌಸ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.ಹಬ್ಬದ ಸಮಯದಲ್ಲಿ ಅನಗತ್ಯ ವಿದ್ಯುತ್ ಕಡಿತ ಮಾಡಬಾರದು. ವಿಶೇಷವಾಗಿ ಬೆಳಿಗ್ಗೆ 3 ರಿಂದ 7 ಗಂಟೆ, ಸಂಜೆ 5 ರಿಂದ ರಾತ್ರಿ 11 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗದಂತೆ ಜೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಕನೀಜ್ ಫಾತಿಮಾ ತಿಳಿಸಿದರು.ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಆರ್.ಪಿ ಜಾಧವ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು.