ಸಂವಿಧಾನಕ್ಕೆ ಅನುಗುಣವಾಗಿ ದೇಶ ಕಟ್ಟಬೇಕಿದೆ
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮಾ.05: ಸಂವಿಧಾನ ಈ ದೇಶವನ್ನು ಗಟ್ಟಿಗೊಳಿಸುತ್ತದೆ, ಆದ್ದರಿಂದ ಸಂವಿಧಾನಕ್ಕೆ ಅನುಗುಣವಾಗಿ ದೇಶ ಕಟ್ಟಬೇಕಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಹೇಳಿದ್ದಾರೆ.
ಅವರು ತಾಲೂಕಿನ ಹಲುವಾಗಲು ಗ್ರಾಮದಲ್ಲಿ ದಿ.ಶಿಕ್ಷಕ ಎನ್.ಆರ್.ಮರೇಗೌಡರ ರವರ ಸ್ಮರಣಾರ್ಥ ಸಂವಿಧಾನ ಕುರಿತು ನಡೆದ ಸ್ಫರ್ದೆಗಳಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಹಾಗೂ ನಾದಮಣಿ ನಾಲ್ಕೂರು ರವರ ಕತ್ತಲ ಹಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜ ತಿದ್ದುವ ಕೆಲಸ ಮಾಗಿದ ಶಿಕ್ಷಕನಿಂದ ಮಾತ್ರ ಸಾದ್ಯ, ಅಂತಹ ಕೆಲಸವನ್ನು ದಿ.ಶಿಕ್ಷಕ ಎನ್.ಆರ್.ಮರೇಗೌಡರ ಮಾಡಿದ್ದಾರೆ, ಆದ್ದರಿಂದ ಗ್ರಾಮಸ್ಥರು ಅವರನ್ನು ಇಂದು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ತಾವರಗೊಂದಿ ನಿವೃತ್ತ ಶಿಕ್ಷಕ ಚೆನ್ನಬಸಪ್ಪ ಮಾತನಾಡಿ ದಿ.ಎನ್.ಆರ್ ಮರೇಗೌಡರು ಸರಳ, ಸಜ್ಜನ ಹಾಗೂ ಸಮಾಜಮುಖಿ ಶಿಕ್ಷಕರಾಗಿದ್ದರು ಎಂದ ಅವರು ಭಾರತದ ಪ್ರಜಾಪ್ರಭುತ್ವದ ವ್ಯಕ್ತಿತ್ವ ಹೇಳಿಕೊಡುವ ಶ್ರೇಷ್ಟ ವಾದುದು ನಮ್ಮ ಸಂವಿಧಾನ ಎಂದು ನುಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ತತ್ವಪದಕಾರ ನಾದಮಣಿ ನಾಲ್ಕೂರು ಮಾತನಾಡಿ ಇಂದು ಪ್ರತಿಕ್ಷಣ ಎದುರಾಗುವ ಸತ್ಯಗಳಿಗೆ, ಸಂವಿಧಾನಕ್ಕೆ ವಿದೇಯರಾಗುವುದು ಕಡಿಮೆಯಾಗಿದೆ ಎಂದರು.
ಜಾತಿಯತೆ, ಲಿಂಗತಾರತಮ್ಯಗಳು ಸಂವಿಧಾನ ಬಂದು 75 ವರ್ಷಗಳು ಕಳೆದರೂ ಕಡಿಮೆಯಾಗಿಲ್ಲ ಹೊರತು ಹೆಚ್ಚಾಗಿವೆ ,ಚೆಂದಾಗಿ ಮಾತನಾಡುತ್ತೇವೆ ಆದರೆ ಅದರಂತೆ ಬದುಕುವುದಿಲ್ಲ, ಮುಖವಾಡ ಹಾಕಿಕೊಂಡು ಬದುಕುತ್ತಿದ್ದೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದಿ.ಶಿಕ್ಷಕ ಎನ್.ಆರ್.ಮರೇಗೌಡರ ಪುತ್ರ ಮಾಲತೇಶ ಮರಿಗೌಡರು ಅವರು ಮಾತನಾಡಿ ಸಂವಿಧಾನದ ಮಹತ್ವ ತಿಳಿಸುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ನಮ್ಮ ತಂದೆಯವರ ಸ್ಮರಣಾರ್ಥವಾಗಿ ಸಂವಿಧಾನ ಕ್ಕೆ ಸಂಬಂಧ ಪಟ್ಟ ಸ್ಪರ್ದೆಗಳನ್ನು ಆಯೋಜಿಸಿದ್ದೇವು ಎಂದು ಹೇಳಿದರು.
ನಾದಮಣಿ ನಾಲ್ಕೂರು ಅವರು ಮಣ್ಣಿಗೆ ವಂದನೆ,ಮುಗಿಲಿಗೆ ವಂದನೆ,ಸಕಲ ಜೀವಕ್ಕೆ ವಂದನೆ ಸೇರಿದಂತೆ ಅನೇಕ ತತ್ವಪದಗಳನ್ನು ಹಾಡಿ ಜನರ ಮನಸ್ಸಿಗೆ ಮುದ ನೀಡಿದರು.
ಮಾಲತೇಶಮರಿಗೌಡರ ಕುಟುಂಬದವರಿಂದ ವಿವಿಧ ಶಾಲೆಗಳ ಗ್ರಂಥಾಲಯಗಳಿಗೆ ಸಂವಿಧಾನದ ಪೀಠಿಕೆ ಹಾಗೂ ಪುಸ್ತಕಗಳನ್ನು ದೇಣಿಗೆಯಾಗಿ ನೀಡಲಾಯಿತು.
ಸಂವಿದಾನ ಕುರಿತು ನಡೆದ ಸ್ಪರ್ದೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ದಿ.ಶಿಕ್ಷಕ ಎನ್.ಆರ್.ಮರಿಗೌಡರ ರವರ ಸ್ಮರಣಾರ್ಥ ಆಯೋಜಿಸಿದ್ದ ಸುಂದರ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.
ಗ್ರಾ.ಪಂ ಅಧ್ಯಕ್ಷೆ ಸರಿತಾ, ನಾಗವೇಣಿ ಮಾಲತೇಶ, ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಬಸವರಾಜ ಸಂಗಪ್ಪನವರ್, ಶಿಕ್ಷಕರಾದ ಸಿ.ಗಂಗಾಧರ,ಪದ್ಮರಾಜ, ಪದ್ಮರಾಜ,ಚಂದ್ರಣ್ಣ, ದೇವೇಂದ್ರಪ್ಪ, ಶಕುಂತಲಾ, ಮುಖಂಡ ಎಂ.ದ್ಯಾಮಪ್ಪ, ನಾಗರಾಜ,ಹಾಸ್ಟೆಲ್ ಮೇಲ್ವಿಚಾರಕ ಎನ್.ಜಿ.ಬಸವರಾಜ, ಶಿವಾನಂದಗೌಡ ಇತರರು ಉಪಸ್ಥಿತರಿದ್ದರು.