ಸುಸಜ್ಜಿತ ಹಾಗೂ ಮಾದರಿ ಆಹಾರ ಸಂಸ್ಕರಣ ಘಟಕ ಸ್ಥಾಪನೆ : ಸಚಿವರ ಅಧ್ಯಕ್ಷತೆಯಲ್ಲಿ ಸಭೆ
ವಿಜಯಪುರ: ಮಾ.03:: ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳಿಗೆ ಯೋಗ್ಯ ಬೆಲೆ ಹಾಗೂ ಆಹಾರ ಉತ್ಪಾದನೆಗೆ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಗುತ್ತಿರುವ ಫುಡ್ ಪಾರ್ಕ್‍ನಲ್ಲಿ ಉಗ್ರಾಣಗಳು, ಶೀತಲಗೃಹಗಳು, ಲ್ಯಾಬೋರೇಟರಿಗಳನ್ನು ನಿರ್ಮಾಣ ಮಾಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಜಿಲ್ಲೆಯ ಆಹಾರ ಉತ್ಪಾದನೆ ಹಾಗೂ ಜಿಲ್ಲೆಯ ಬೆಳೆಗಳಿಗೆ ಯೋಗ್ಯ ಬೆಲೆ ದೊರಕುವ ನಿಟ್ಟಿನಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಸುಸಜ್ಜಿತ ಫುಡ್ ಪಾರ್ಕ್ ಅಭಿವೃದ್ದಿ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ವಿವಿಧ ಬೆಳೆಗಾರರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಲಹೆ ನೀಡಿ, 20 ರಿಂದ 25 ಸಾವಿರ ಮೆಟ್ರಿಕ್ ಟನ್ ಸ್ಟೋರೇಜ್‍ಗೆ ಅವಕಾಶವಿದ್ದು, ಅದೇ ಮಹಾರಾಷ್ಟ್ರ ರಾಜ್ಯದ ತಾಸಗಾಂವನಲ್ಲಿ 1ಲಕ್ಷ ಮೆಟ್ರಿಕ್ ಟನ್ ಸ್ಟೋರೇಜ್‍ಗೆ ಅವಕಾಶವಿರುವುದರಿಂದ ಜಿಲ್ಲೆಯಲ್ಲಿನ ಸ್ಟೋರೇಜ್ ಪ್ರಮಾಣ ಹೆಚ್ಚಿಸಬೇಕು. ಆನ್‍ಲೈನ್ ಟ್ರೆಡಿಂಗ್‍ನಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು. ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಪ್ರಮುಖ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ, ತೊಗರಿ, ಜೋಳ, ಗೋವಿನ ಜೋಳ, ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ಸಂಸ್ಕರಣೆಗೆ ಅವಕಾಶ ಕಲ್ಪಿಸುವುದು, ಸೂಕ್ತ ಪ್ಯಾಕೇಜಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಸಲಹೆಗಳನ್ನು ನೀಡಲಾಯಿತು.
ಜಿಲ್ಲೆಯ ಅಂತರ್‍ಜಲ ಮಟ್ಟ ಹೆಚ್ಚಾಗಿರುವುದರಿಂದ ಜಿಲ್ಲೆಯಲ್ಲಿ ತರಕಾರಿ ಉತ್ಪಾದನೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಫುಡ್‍ಪಾರ್ಕ್‍ನಲ್ಲಿ ವಿವಿಧ ಬೆಳೆಗಳೊಂದಿಗೆ ತರಕಾರಿಗಳ ಸಂಸ್ಕರಣೆ ವ್ಯವಸ್ಥೆ ಕಲ್ಪಿಸಬೇಕು. ಅದರಂತೆ ಆನ್‍ಲೈನ್ ಟ್ರೇಡಿಂಗ್ ಸಮಸ್ಯೆ ನಿವಾರಣೆಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣ ಆರಂಭದಿಂದ ಕಾರ್ಗೋ ಸೇವೆ ಕಾರ್ಯಾರಂಭವಾಗಿ. ಜಿಲ್ಲೆಯ ವ್ಯಾಪಾರ ವಹಿವಾಟಕ್ಕೆ ಅನುಕೂಲವಾಗಲಿದ್ದು, ಸಭೆಯಲ್ಲಿ ಸ್ವೀಕೃತವಾದ ಸಲಹೆ-ಸೂಚನೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ, ಆಹಾರ ಸಂಸ್ಕರಣೆ ಹಾಗೂ ಹಾರ್ವೆಸ್ಟಿಂಗ್ ಟೆಕ್ನಾಲಜಿ ವಿಶೇಷ ಕಾರ್ಯದರ್ಶಿ ಶ್ರೀಮತಿ ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ವಿವಿಧ ಬೆಳೆಗಾರರು, ರೈತ ಉತ್ಪಾದಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಪ್ರಗತಿಪರ ರೈತರು ಉಪಸ್ಥಿತರಿದ್ದರು.