ಗಣೇಶೋತ್ಸವ: ೪.೫ ಲಕ್ಷಕ್ಕೆ ಲಡ್ಡು ಬಿಕರಿ
ಬೆಂಗಳೂರು.ಸೆ.೧೬- ಸಾರ್ವಜನಿಕ ಗಣೇಶೋತ್ಸವದಲ್ಲಿ ಲಡ್ಡು ಪ್ರಮುಖ ಆಕರ್ಷಣೆ ಆದರೆ ಈ ಲಾಡು ಬರೋಬ್ಬರಿ ೨೫ ಕೆಜಿ ತೂಕವಿದೆ, ಈ ಭಾರೀ ಗಾತ್ರದ ಲಡ್ಡುವನ್ನು ಬಹಿರಂಗ ಹರಾಜಿನಲ್ಲಿ ೪.೫ ಲಕ್ಷಕ್ಕೆ ಬಿಕರಿಯಾಗಿ ಭಕ್ತರ ಗಮನ ಸೆಳೆದಿದೆ.
ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಗಣೇಶ ಪ್ರಸಾದ ಖರೀದಿಗೆ ಭಕ್ತರು ಜಮಾಯಿಸಿದ್ದರು. ಗಣೇಶ ಪ್ರಸಾದ ಲಡ್ಡು ಹರಾಜಿನಲ್ಲಿ ಎಲ್ಲರ ಗಮನ ಸೆಳೆದಿದೆ.
ಲಡ್ಡುವನ್ನು ಬಿಜೆಪಿ ಮುಖಂಡ ಚಿಕ್ಕಸಂದ್ರ ಮೋಹನ್ ಕುಮಾರ್ ಖರೀದಿಸಿದರು. ಹರಾಜಾದ ಲಡ್ಡುವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಎಸ್.ಮುನಿರಾಜು ಮೋಹನ್ ಕುಮಾರ್‌ಗೆ ನೀಡಿದರು.
ಸೂರಜ್ ಪೌಂಡೇಶನ್ ಸಂಸ್ಥಾಪಕಿ ಸುಜಾತ ಮುನಿರಾಜು ನೇತೃತ್ವದಲ್ಲಿ ಮಹಿಳೆಯರಿಗೆ ಹಲವು ಮನರಂಜನೆ ಕಾರ್ಯಕ್ರಮಗಳಾದ ರಂಗೋಲಿ, ಗಾಯನ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ಗಿಚ್ಚ ಗಿಲಿಗಿಲಿ ಖ್ಯಾತಿಯ ರಾಘವೇಂದ್ರ ಅವರಿಂದ ಕಾಮಿಡಿ ಶೋ ಮತ್ತು ಗಣ್ಯರಿಗೆ ಸನ್ಮಾನ ನಡೆದವು. ಖ್ಯಾತ ಗಾಯಕ ರಘು ದೀಕ್ಷಿತ್ ತಂಡದಿಂದ ಸಂಗೀತ ರಸಮಂಜರಿ ಆಯೋಜಿಸಲಾಗಿತ್ತು. ಸಂತ ಶಿಶುನಾಳ ಶರೀಫರ ಮತ್ತು ಚಿತ್ರಗೀತೆಗಳಿಗೆ ಸೇರಿದ್ದ ಜನರು ಕುಣಿದು ಕುಪ್ಪಳಿಸಿದರು.
ಮೆರವಣಿಗೆಯಲ್ಲಿ ೭೫ ಕ್ಕೂ ಹೆಚ್ಚಿನ ಗಣೇಶ ಮೂರ್ತಿಗಳಿದ್ದವು. ಕೇರಳ,ಪಂಜಾಬ್, ಮುಂಬೈ, ಕರ್ನಾಟಕದಿಂದ ಬಂದ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದವು.
ಎಂಇಐ ಆಟದ ಮೈದಾನದಿಂದ ಪ್ರಾರಂಭವಾಗಿ ಬಾಗಲಗುಂಟೆ ಮಾರಮ್ಮನ ದೇವಸ್ಥಾನ, ಹೆಸರುಘಟ್ಟ ಮುಖ್ಯ ರಸ್ತೆ, ಮಲ್ಲಸಂದ್ರದ ಪೈಪ್‌ಪೈನ್, ಸೆಲೆಕ್ಷನ್ ಅಲ್ಲಿಂದ ದಾಸರಹಳ್ಳಿ ರಾಷ್ಟ್ರಿಯ ಹೆದ್ದಾರಿ ಮೂಲಕ ಭಕ್ತರ ಹೆಜ್ಜೆಯೊಂದಿಗೆ ಸಾಗಿತು.
ಚೊಕ್ಕಸಂದ್ರದ ಕೆರೆ ಹತ್ತಿರದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು. ಕಳೆದ ವರ್ಷ ಗಣೇಶನ ಪ್ರಸಾದ ಲಡ್ಡುವನ್ನು ರಿಯಲ್ ಎಸ್ಟೇಟ್ ಉದ್ಯಮಿ ಲಕ್ಷ್ಮಣಗೌಡ ೪.೨೫ ಲಕ್ಷ ರೂ.ಗೆ ಪಡೆದಿದ್ದರು. ಈ ಬಾರಿ ನಮ್ಮ ಮುಖಂಡ ಮೋಹನ್ ಕುಮಾರ್ ೪.೫ ಲಕ್ಷ ರೂ.ಗೆ ಖರೀದಿಸಿದ್ದು ಎಲ್ಲರ ಗಮನ ಸೆಳೆದಿದೆ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.