ಪೆರ್ಡೂರು ದೇವಸ್ಥಾನಕ್ಕೆ ಧಕ್ಕೆ ಆಗದಂತೆ ಪರ್ಯಾಯ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ-ಹೈಕೋರ್ಟ್ ಸೂಚನೆ
ರಾಷ್ಟ್ರೀಯ ಹೆದ್ದಾರಿ ೧೬೯ಎ ಕಾಮಗಾರಿ ವೇಳೆ ಇತಿಹಾಸ ಪ್ರಸಿದ್ದ ಪೆರ್ಡೂರಿನ ಅನಂತಪದ್ಮನಾಭ ದೇವಾಲಯಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ರಾಷ್ಟ್ರೀಯ ಹೆದ್ದಾರಿಯನ್ನು ಪರ್ಯಾಯ ಮಾರ್ಗದಲ್ಲಿ ನಿರ್ಮಾಣಕ್ಕೆ ಸೂಚಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ೧೬೯ಎ ಕಾಮಾಗಾರಿ ವೇಳೆ ಪೆರ್ಡೂರು ಭಾಗದಲ್ಲಿ ದೇವಸ್ಥಾನಕ್ಕೆ ತಾಗಿಕೊಂಡು ಪೆರ್ಡೂರು ಪೇಟೆಯಲ್ಲಿ ಹೆದ್ದಾರಿ ಹಾದು ಹೋಗುವ ನಕಾಶೆ ತಯಾರಾಗಿತ್ತು. ಈ ಬಗ್ಗೆ ಸ್ಥಳೀಯರಾದ ರಂಜಿತ್ ಪ್ರಭು, ದೇವಸ್ಥಾನದ ಆಡಳಿತ ಕೋರ್ಟ್ ಮೊರೆ ಹೋಗಿದ್ದರು.
ದೇವಸ್ಥಾನದ ಪರ ವಾದ ಮಂಡಿಸಿದ ವಕೀಲ ಕೇತನ್ ಕುಮಾರ್ ಬಂಗೇರ, ಹೆದ್ದಾರಿ ಅಗಲಗೊಳಿಸುವ ಕಾಮಗಾರಿಯಿಂದ ಪೆರ್ಡೂರಿನ ಐತಿಹಾಸಿಕ, ಪ್ರಾಚೀನ ಅನಂತ ಪದ್ಮನಾಭ ದೇವಾಲಯದ ರಥಬೀದಿ, ನಾಗಬನ ಜಾಗದಲ್ಲಿಯೇ ಹೆದ್ದಾರಿ ಬರಲಿದ್ದು, ಇದರಿಂದ ತೊಂದರೆ ಆಗಲಿದೆ. ದೇವಾಲಯ ಮೂಲ ಸ್ವರೂಪ ಕಳೆದುಕೊಂಡು ವಾಸ್ತುವಿಗೆ ಧಕ್ಕೆ ಅಗಲಿದೆ ಎಂದು ತಿಳಿಸಿದ್ದರು.
ಪುರಾತನ ಇತಿಹಾಸ ಇರುವ ದೇವಸ್ಥಾನಗಳನ್ನು ತೊಂದರೆಯಾಗದಂತೆ ರಕ್ಷಿಸಬೇಕು. ಈ ಬಗ್ಗೆ ಹೆದ್ದಾರಿ ಇಲಾಖೆ ಪರಿಶೀಲನೆ ನಡೆಸಿ ಬದಲಿ ಮಾರ್ಗ ಸೂಚಿಸಬೇಕು. ರಸ್ತೆ ವಿಸ್ತರಣೆ ಅಥವಾ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವಾಗ ದೇವಾಲಯ ಸಹಿತ ಧಾರ್ಮಿಕ ಕಟ್ಟಡಗಳಿಗೆ ಧಕ್ಕೆ ಆಗುವುದಾದರೆ ಅಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ಪ್ರಾಧಿಕಾರ ಪರ್ಯಾಯ ಮಾರ್ಗಗಳನ್ನು ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹಾಗಾಗಿ ಈ ಪ್ರಕರಣದಲ್ಲೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಜನರಿಗೆ ಸಮಸ್ಯೆ ಆಗದಂತೆ ಬದಲಿ ಮಾರ್ಗ ಸೂಚಿಸಿ ಎಂದು ನ್ಯಾಯಾಧೀಶರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪರ ವಕೀಲರಿಗೆ ಮೌಖಿಕ ಆದೇಶ ನೀಡಿದ್ದಾರೆ.