ಲೋಕಸಭಾ ಚುನಾವಣೆ: ವೆಚ್ಚ ಕುರಿತ ದರಪಟ್ಟಿ ನಿಗದಿ ಸಂಬಂಧ ಜಿಲ್ಲಾಧಿಕಾರಿ ಸಭೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.28:- ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆಗೆ ಬಳಸಲಾಗುವ ಸಾಮಾಗ್ರಿಗಳಿಗೆ ಭರಿಸಬಹುದಾದ ವೆಚ್ಚಗಳ ಕುರಿತು ದರಪಟ್ಟಿ ನಿಗದಿಪಡಿಸುವ ಸಭೆ ಇಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಚುನಾವಣೆಗೆ ಉಪಯೋಗಿಸುವ ವಿವಿಧ ಸಾಮಗ್ರಿಗಳಿಗೆ ತಗಲುವ ವೆಚ್ಚಗಳ ಕುರಿತ ದರಪಟ್ಟಿ ನಿಗದಿ ಮಾಡುವ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಯವರಾದ ಶಿಲ್ಪಾ ನಾಗ್ ಅವರು ಸಭೆ ನಡೆಸಿದರು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಚುನಾವಣಾ ಸಭೆ, ಸಮಾರಂಭ, ಪ್ರಚಾರ ಸಾಮಗ್ರಿ, ವಾಹನಗಳ ಬಾಡಿಗೆ, ಸಮಾರಂಭಗಳಲ್ಲಿ ಉಪಯೋಗಿಸಬಹುದಾದ ವಸ್ತುಗಳು, ಶಾಮಿಯಾನ, ಕುರ್ಚಿ, ಧ್ವನಿವರ್ಧಕ, ಬ್ಯಾನರ್, ಕರಪತ್ರ, ಪೋಸ್ಟರ್, ಎಲ್‍ಇಡಿ ಪರದೆ ಸೇರಿದಂತೆ ಇನ್ನಿತರ ಸಾಮಗ್ರಿಗಳ ದರ ನಿಗದಿ ಸಂಬಂಧ ವಿವರವಾಗಿ ಚರ್ಚಿಸಲಾಯಿತು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಪ್ರತಿಯೊಂದು ವೆಚ್ಚವನ್ನು ಅಭ್ಯರ್ಥಿಗಳ ಅಧಿಕೃತ ಖಾತೆಯಿಂದ ನಿರ್ವಹಿಸಬೇಕಾಗುತ್ತದೆ. ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಚುನಾವಾಣ ಆಯೋಗ ನೀಡಿರುವ ಸೂಚನೆ ಮಾರ್ಗದರ್ಶನಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂದರು.
ಚುನಾವಣೆ ಸಂಬಂಧ ಮಾಡಲಾಗುವ ಎಲ್ಲ ಖರ್ಚು ವೆಚ್ಚಗಳನ್ನು ಅಭ್ಯರ್ಥಿಗಳು ಇಡಬೇಕಾಗುತ್ತದೆ. ನಿಗದಿತ ವಹಿಯಲ್ಲಿ ಎಲ್ಲವನ್ನು ನಮೂದಿಸಬೇಕಾಗುತ್ತದೆ. ಚುನಾವಣಾ ವೆಚ್ಚ ಅಧಿಕಾರಿಗಳು ಈ ಸಂಬಂಧ ಪರಿಶೀಲಿಸಲಿದ್ದಾರೆ. ಮುಕ್ತ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಗೆ ಸಹಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಸ್.ಪಿ. ಮಹೇಶ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎ.ಎಚ್. ನಜ್ರುಲ್ಲಾ ಖಾನ್, ವೃಷಬೇಂದ್ರಪ್ಪ, ಎನ್. ನಾಗಯ್ಯ, ಮಹದೇವಸ್ವಾಮಿ, ಎಸ್. ಮಹೇಶ್ ಗೌಡ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.