ದೆಹಲಿಯಲ್ಲಿ ರೈತ ಚಳುವಳಿ ಮೇಲಿನ ದೌರ್ಜನ್ಯ ಖಂಡಿಸಿ ಪಂಜಿನ ಮೆರವಣಿಗೆ
ಕಲಬುರಗಿ:ಫೆ.26: ದೆಹಲಿಯಲ್ಲಿ ರೈತ ಚಳುವಳಿಯ ಮೇಲಿನ ಪೋಲಿಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ವಿಶ್ವ ವಾಣಿಜ್ಯಕ ಒಪ್ಪಂದದಿಂದ ಕೃಷಿಯನ್ನು ಹೊರಗಿಡುವಂತೆ ಆಗ್ರಹಿಸಿ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೋಮವಾರ ರೈತ, ದಲಿತ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಸೂಪರ್ ಮಾರ್ಕೆಟ್‍ನ ಚೌಕ್ ಪೋಲಿಸ್ ಠಾಣೆಯಿಂದ ಜಗತ್ ವೃತ್ತದವರೆಗೆ ಪಂಜಿನ ಮೆರವಣಿಗೆ ಮಾಡಿದರು.
ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೆಹಲಿ ಚಲೋ ಮಾಡುತ್ತಿರುವ ರೈತರಿಗೆ ಹರಿಯಾಣಾ ಗಡಿಯಲ್ಲಿ ತಡೆದು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಡ್ರೋನ್ ಬಳಸಿ ಆಶ್ರುವಾಯುಗಳನ್ನು ಸಿಡಿಸಲಾಗುತ್ತಿದೆ. ಲಾಠಿ ಪ್ರಹಾರ, ರಬ್ಬರ್ ಗುಂಡುಗಳನ್ನು ಮನಸೋ ಇಚ್ಛೆ ಬಳಸಿ ಕ್ರೂರವಾಗಿ ರೈತರಿಗೆ ದಮನಿಸಲಾಗುತ್ತಿದೆ. ರೈತರಿಗೆ ಶತೃ ಸೈನಿಕರಂತೆ ಪರಿಗಣಿಸಲಾಗುತ್ತಿದೆ. ಅಮಾನವೀಯ ದೌರ್ಜನ್ಯದ ವಿರುದ್ಧ ಎಲ್ಲ ಕಡೆಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಈ ಸಂದರ್ಭದಲಿಯೇ ವಿಶ್ವ ವಾಣಿಜ್ಯ ಒಪ್ಪಂದದ ಸಭೆ ಮೂರು ದಿನಗಳ ಕಾಲ ಅಬುಧಾಬಿಯಲ್ಲಿ ಇಂದೇ ಆರಂಭವಾಗುತ್ತಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ಹೊರಹಾಕಿದರು.
ಭಾರತ ದೇಶದ ಕೃಷಿಕರು ಅನುಭವಿಸುತ್ತಿರುವ ಬೆಲೆ ಕುಸಿತಕ್ಕೆ ವಿಶ್ವ ವಾಣಿಜ್ಯ ಒಪ್ಪಂದಗಳು ನೇರವಾಗಿ ಕಾರಣವಾಗಿದ್ದು, ಕೃಷಿ ರಂಗವನ್ನು ಒಪ್ಪಂದದಿಂದ ಹೊರಗಿಡುವಂತೆ ರೈತ ಚಳುವಳಿಗೂ ದೀರ್ಘ ಕಾಲದಿಂದ ಆಗ್ರಹಿಸುತ್ತಿವೆ. ದೇಶದ ರೈತ ಚಳುವಳಿಯಲ್ಲಿ ಒಡಕು ಉಂಟು ಮಾಡುವ ಸರ್ಕಾರದ ಹೀನ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲು ದೆಹಲಿ ಐತಿಹಾಸಿಕ ರೈತ ಹೋರಾಟದ ಆಗ್ರಹಗಳಾದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕಾನೂನು, ವಿದ್ಯುತ್ ಖಾಸಗೀಕರಣ ಮಸೂದೆ ರದ್ದು, 736 ಹುತಾತ್ಮ ರೈತ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪಂಜಿನ ಮೆರವಣಿಗೆಯಲ್ಲಿ ನಾಗೇಂದ್ರಪ್ಪ ಥಂಬೆ, ಅರ್ಜುನ್ ಗೊಬ್ಬೂರ್, ಎಸ್.ಆರ್. ಕೊಲ್ಲೂರ್, ಮಲ್ಲಿಕಾರ್ಜುನ್ ಪಾಟೀಲ್, ಭೀಮಾಶಂಕರ್ ಮಾಡ್ಯಳ್, ಎಂ.ಬಿ. ಸಜ್ಜನ್, ಮೇಘರಾಜ್ ಕಠಾರೆ, ಪದ್ಮಿನಿ ಕಿರಣಗಿ, ಸುಧಾಮ್ ಧನ್ನಿ, ದಿಲೀಪ್ ನಾಗೂರೆ, ಜಾಫರ್‍ಖಾನ್, ಜಾವೇದ್ ಹುಸೇನ್, ವಿರುಪಾಕ್ಷಪ್ಪ ತಡಕಲ್, ನಾಗಯ್ಯಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.