ಯಶಸ್ವಿ ಜೀವನಕ್ಕೆ ಸತತ ಪರಿಶ್ರಮ, ಸ್ಪಷ್ಟ ಗುರಿ, ಸಾಧಿಸುವ ಛಲ ಇರಬೇಕು
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ25: ವಿದ್ಯಾರ್ಥಿಗಳು ಸತತ ಪರಿಶ್ರಮ, ಸ್ಪಷ್ಟ ಗುರಿ ಸಾಧಿಸುವ ಛಲ ಹೊಂದಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಅಧ್ಯಕ್ಷರಾದ ಷ.ಬ್ರ. ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಟಿ ಎಂ ಎ ಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಪಿಯು ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ ಸೋಲುಗಳಿಂದ ಮನುಷ್ಯ ಹೆಚ್ಚು ಪಾಠ ಕಲಿಯುತ್ತಾನೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಪರಿಶ್ರಮ, ಸ್ಪಷ್ಟ ಗುರಿ, ಸಾಧಿಸುವ ಛಲ, ಪ್ರಾಮಾಣಿಕ ಪ್ರಯತ್ನ, ಗುರುಗಳ ಸಮರ್ಪಕ ಮಾರ್ಗದರ್ಶನ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ತನ್ನದೇ ಆದ ವಿಶಿಷ್ಟ ಸಾಧನೆಯನ್ನು ಮಾಡಿದೆ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರ ಮಾರ್ಗದರ್ಶನ ಪ್ರೋತ್ಸಾಹ ಈ ಸಾಧನೆಗೆ ಕಾರಣವಾಗಿದೆ ಎಂದು ಅವರು ಶ್ಲಾಘಿಸಿದರು.
ಟಿ ಎಂ ಎ ಇ ಸಂಸ್ಥೆಯ ಉಪ ಕಾರ್ಯದರ್ಶಿ ಟಿ.ಎಂ. ವಿಜಯಕುಮಾರ್ ಅವರು ಮಾತನಾಡಿ, ಹೊಸಪೇಟೆ ಭಾಗದಲ್ಲಿ ಗುಣಾತ್ಮಕ ಹಾಗೂ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಿಯು ಕಾಲೇಜನ್ನು ಆರಂಭಿಸಲಾಗಿದೆ. ಎಲ್ಲ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ಮೂರೇ ವರ್ಷಗಳಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿದೆ. ನೀಟ್, ಜೆಇಇ, ಕೆ ಸಿ ಟಿ,  ಸಿಎ, ಸಿ ಎಸ್, ಸಿಎಂಎ ಗಳಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಕಾಲೇಜು ಶ್ರಮಿಸುತ್ತಿದೆ ಎಂದು ತಿಳಿಸಿದರು.‌
ಕಾಲೇಜಿನ ಅಧ್ಯಕ್ಷ ಎಂ. ಕೆ. ರವೀಂದ್ರ, ಪ್ರಾಚಾರ್ಯ ಪ್ರೊ. ವಿ. ಎಸ್. ದಯಾನಂದ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಪ್ರೊ. ವಿ ಎಸ್ ದಯಾನಂದ ಕುಮಾರ್,  ಕಾಲೇಜಿನ ಶಿಕ್ಷಣ ಸಂಯೋಜಕ ಶ್ರೀ ಪಿ.ವಿ ಶೇಷ ಸಾಯಿ, ಪ್ರೋ-ಎಡ್ಜ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಫಯಾದ್ ಅಹಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ 2022-23 ಸಾಲಿನ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ 2024 ನೇ ಸಾಲಿನ  ಜೆಇಇ, ಸಿಎ, ಸಿ ಎಸ್, ಸಿಎಂಎ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.‌ ಕಾಲೇಜು ಆಡಳಿತ ಮಂಡಳಿ ಪರವಾಗಿ ಷ.ಬ್ರ. ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರನ್ನು ವಿಶೇಷವಾಗಿ ಗೌರವಿಸಲಾಯಿತು.
ರೋಜ್ ಬಡ್ ಶಾಲೆಯ ನಿರ್ದೇಶಕಿ ಟಿ ಎಂ ಉಷಾದೇವಿ ಅವರು ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಅನಿಸಿಕೆ ಹಂಚಿಕೊಂಡರು.
ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಮೀರಾ ಕೆ ಪ್ರಾರ್ಥಿಸಿದಳು. ಉಪನ್ಯಾಸಕರಾದ ಕೊಟ್ರೇಶ್ ಸಿ ಮತ್ತು ಶ್ರೀರಂಗನಾಥಾಚಾರ್ಯ, ಸಂಗೀತ ಶಿಕ್ಷಕ ಮಹೇಶ್ ವಾದ್ಯ ಸಹಕಾರ ನೀಡಿದರು.  ಸ್ಟೆಲ್ಲಾ ಏಂಜೆಲ್ ಸ್ವಾಗತಿಸಿದರು. ಉಪನ್ಯಾಸಕ ವರುಣ್, ಸಿಂಧೂ ನಿರ್ವಹಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.‌ ಸಂಗಮೇಶ್ ಗಣಿ ಮತ್ತು ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಜ್ಯೋತಿ ಎಂ ಕಾರ್ಯಕ್ರಮ ನಿರೂಪಿಸಿದರು.‌ ಜೀವಶಾಸ್ತ್ರ ಉಪನ್ಯಾಸಕಿ  ಸೌಮ್ಯ ಸೂರಿಮಠ ವಂದಿಸಿದರು.  ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.