ಕಲಬುರಗಿ ಯುವಕರು ತವರಿಗೆ
ಕಲಬುರಗಿ.ಸೆ.15-ರಷ್ಯಾದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಯುವಕರು ತಾಯ್ನಾಡಿಗೆ ಮರಳಿದ್ದಾರೆ. ಕಲಬುರಗಿಯ ಮೂವರು ಸೇರಿ ಒಟ್ಟು ಆರು ಜನ ಭಾರತೀಯರು ತವರಿಗೆ ವಾಪಸ್ ಆಗಿದ್ದಾರೆ. ಕಲಬುರಗಿಯ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಬಾದ್ ಕಾಲೋನಿ ನಿವಾಸಿ ಮೊಹಮ್ಮದ್ ಸಮೀರ್, ಮಿಜಗುರಿ ಪ್ರದೇಶದ ಮೊಹಮ್ಮದ್ ನಯೂಮ್ ವಾಪಸ್ ಆದ ಯುವಕರು.
ಯುವಕರು ಮುಂಬೈ ಮೂಲದ ಏಜೆಂಟ್ ಮೂಲಕ ರಷ್ಯಾಗೆ ತೆರಳಿದ್ದರು. ಮುಂಬೈ ಮೂಲದ ಏಜೆಂಟ್ ಈ ಯುವಕರಿಗೆ ರಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕಳುಹಿಸಿದ್ದರು. ಆದರೆ, ಯುವಕರನ್ನು ರಷ್ಯಾ ಸೇನೆ ಯುದ್ಧ ಭೂಮಿಯಲ್ಲಿ ಬಳಸಿಕೊಂಡಿತ್ತು. ಯುವಕರಿಗೆ ರಷ್ಯಾದ ಸೈನ್ಯದಲ್ಲಿ ಬಂಕರ್ ಅಗೆಯುವ ಕೆಲಸ ನೀಡಲಾಗಿತ್ತು. ಈ ಕುರಿತು ಯುವಕರು ವಿಡಿಯೋ ಮಾಡಿ ಕಷ್ಟ ತೋಡಿಕೊಂಡಿದ್ದರು.
ಬಳಿಕ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಯುವಕರನ್ನು ಮರಳಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಆರೇಳು ತಿಂಗಳ ಬಳಿಕ ಯುವಕರು ತಾಯ್ನಾಡಿಗೆ ಮರಳಿದ್ದಾರೆ.
ಪತ್ರ ಬರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ
ಕಲಬುರಗಿ ಜಿಲ್ಲೆಯ ಮೂವರು ಹಾಗೂ ತೆಲಂಗಾಣದ ವ್ಯಕ್ತಿಯೊಬ್ಬ ಈ ಯುವಕರಿಗೆ ಕೆಲಸದ ಆಮಿಷವೊಡ್ಡಿ ಅವರನ್ನು ರಷ್ಯಾಕ್ಕೆ ಕರೆಸಿಕೊಂಡು, ಬಲವಂತವಾಗಿ ಉಕ್ರೇನ್ ವಿರುದ್ಧ ಯದ್ಧಕ್ಕೆ ತಳ್ಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಯುವಕರನ್ನು ರಷ್ಯಾ ಸೇನೆ ಬಳಸಿಕೊಂಡಿದೆ ಎಂದು ಆಘಾತಕಾರಿ ವಿಷಯಗಳು ಬಿತ್ತರವಾಗಿವೆ. ರಷ್ಯಾದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಎಲ್ಲ ಭಾರತೀಯರು ಹಾಗೂ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವಂತೆ ಪತ್ರದ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.