ಶಿಥಿಲಾವಸ್ಥೆಯಲ್ಲಿ ಮದಲಿಂಗನ ಕಣಿವೆ ವೀಕ್ಷಣಾ ಗೋಪುರ
ಚಿಕ್ಕನಾಯಕನಹಳ್ಳಿ, ಸೆ. ೧೪- ತಾಲ್ಲೂಕಿನ ಮದಲಿಂಗನ ಕಣಿವೆ ಅರಣ್ಯ ಪ್ರದೇಶದ ಸಾರ್ವಜನಿಕ ವೀಕ್ಷಣಾ ಗೋಪುರ ಶಿಥಿಲಾವಸ್ಥೆಗೆ ತಲುಪಿದೆ.
ಪಟ್ಟಣಕ್ಕೆ ಸಮೀಪವಿರುವ ಮದಲಿಂಗನ ಕಣಿವೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಪ್ರಕೃತಿ ಸೊಬಗನ್ನು ವೀಕ್ಷಿಸುವ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ವೀಕ್ಷಣಾ ಗೋಪುರದ ಒಳಭಾಗ ತುಕ್ಕು ಹಿಡಿದು ಹಾನಿಗೊಳಗಾಗಿ ಮುರಿದು ಬಿದ್ದಿದೆ.
ವೀಕ್ಷಣಾ ಗೋಪುರದ ಒಳಭಾಗದಲ್ಲಿ ಮಳೆ ನೀರು ಸಂಗ್ರಹವಾಗಿ, ಕಬ್ಬಿಣ ತುಕ್ಕು ಹಿಡಿದು ಶಿಥಿಲಾವಸ್ಥೆಗೆ ತಲುಪಿ ಅದು ಮುರಿದುಕೊಂಡು ಬಿದ್ದಿರುವಂತೆ ಕಾಣುತ್ತಿದೆ. ಗೋಪುರದ ಒಳಗಡೆ ಮಳೆ ನೀರು ಸಂಗ್ರಹವಾಗದೆ ಸರಾಗವಾಗಿ ಹರಿದು ಹೋಗಲು ಅದಕ್ಕೆ ದಾರಿ ಮಾಡಿಕೊಡದಿರುವುದೇ ಇದಕ್ಕೆ ಕಾರಣ ಎಂದು ಪರಿಸರ ಪ್ರೇಮಿಗಳು ಹಾಗೂ ಪಕ್ಷಿ ವೀಕ್ಷಕ ತಜ್ಞರು ದೂರಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯನ್ನು ಪ್ರಾರಂಭದಲ್ಲೇ ಪರಿಶೀಲಿಸಿ ಅದರ ಬಗ್ಗೆ ಎಚ್ಚರ ವಹಿಸದಿರುವುದು ಮತ್ತು ತುಕ್ಕು ಹಿಡಿದ ಗೋಪುರ ಸಂಪೂರ್ಣ ಹಾನಿಗೊಳಗಾಗುವವರೆಗೂ ಅದರ ಬಗ್ಗೆ ನಿಗಾ ವಹಿಸದೇ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.