ರೈಲ್ವೆ ನಿಲ್ದಾಣಕ್ಕೆ ಸಿದ್ದೇಶ್ವರ ಶ್ರೀ, ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರು ನಾಮಕರಣ ಮಾಡುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ
ವಿಜಯಪುರ,ಸೆ.11 : ವಿಜಯಪುರ ನಗರದ ರೈಲ್ವೆ ನಿಲ್ದಾಣಕ್ಕೆ ಸಿದ್ದೇಶ್ವರ ಶ್ರೀಗಳು ಹಾಗೂ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಲಿದ್ದು, ಜಿಲ್ಲೆಯು ಬಸವೇಶ್ವರರು ಜನಿಸಿದ ಜಿಲ್ಲೆಯಾಗಿದೆ. ಬಂಥನಾಳ ಶಿವಯೋಗಿಗಳು ಶಿಕ್ಷಣ ಕ್ರಾಂತಿ ಮಾಡಿದ್ದು, ನಾಡಿನ ಶರಣರ ಸಂತರ ಬೀಡಾಗಿದೆ. ಜಿಲ್ಲೆಯು ಶ್ರೀ ಸಿದ್ದೇಶ್ವರ ಶ್ರೀಗಳು ನಡೆದಾಡಿದ ನಾಡಾಗಿದೆ. ದೇಶದಲ್ಲಿಯೇ ಐತಿಹಾಸಿಕ ಅದ್ಬುತವಾದ ಗೋಲಗುಂಬಜವನ್ನು ಹೊಂದಿದ ನಗರವಾಗಿದೆ. ಪಂಚನದಿಗಳ ಬೀಡು, ಗೋದಿ ನಾಡು, ಗುಮ್ಮಟಗಿರಿ, ದ್ರಾಕ್ಷಿ ಮತ್ತು ನಿಂಬೆ ಬೆಳೆಯವ ಪಂಚ ನದಿಗಳ ನಾಡಾಗಿದೆ. ಈ ಎಲ್ಲ ದೃಷ್ಟಿಕೋನದಿಂದ ವಿಜಯಪುರ ನಗರದ ಅಭಿವೃದ್ದಿ ಹಾಗೂ ನಗರದ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರು ಮರು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಮಹಾತ್ಮಾ ಬಸವೇಶ್ವರರ ಹೆಸರು ನಾಮಕರಣ ಮಾಡುವಂತಾಗಬೇಕು. ಮಹಾತ್ಮಗಾಂಧಿ ವೃತ್ತವನ್ನು ನವೀಕರಣಗೊಳಿಸಿ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಿತ್ತೂರ ರಾಣಿ ಚೆನ್ನಮ್ಮ ರಂಗಮಂದಿರವನ್ನು ಪುನಃ ಪ್ರಾರಂಭವಿಸಿ ಕಲಾವಿದರಿಗೆ ಅವಕಾಶ ಹಾಗೂ ನಾಟಕ ಪ್ರದರ್ಶನಗೊಳಿಸುವಂತೆ ಮಾಡಲು ಹಾಗೂ ಇನ್ನಿತರ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡು ಮಾದರಿ ಜಿಲ್ಲೆಯನ್ನಾಗಿ ಮಾಡುವಂತಾಗಬೇಕು. ಈ ಅಭಿವೃದ್ದಿ ಕಾಮಗಾರಿಗಳನ್ನು ಒಂದು ತಿಂಗಳ ಒಳಗಡೆ ಕೈಗೊಳ್ಳಬೇಕು. ಕೈಗೊಳ್ಳದೇ ಹೋದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ದಾಶ್ಯಾಳಗೌಡ, ಮುಕ್ಕದಸ್ ಇನಾಮದಾರ, ಆನಂದ ಹುನ್ನೂರ, ಪ್ರವೀಣ ಇಜೇರಿ, ಸದಾಶಿವ ಚವ್ಹಾಣ, ಮೀನಾ ಪ್ತಾರ, ಅನ್ನಪೂರ್ಣ ಕೋಳಿ, ಸಿದರಾಜ ಹೊಳಿ, ರಿಯಾಜ ಪಾಂಡು, ವಿರೇಶ ಪಾಟೀಲ, ಉಮೇಶ ರುದ್ರಮುನಿ, ಗಾಯತ್ರಿ ರೆಡ್ಡೇಕರ, ಬೇಬಿ ತಳವಾರ, ಮಲ್ಲಮ್ಮ ಲಮಾಣಿ, ಸುಜಾತಾ ಪೂಜಾರಿ, ಪಿಂಟು ಗೊಬ್ಬೂರ, ಶಿವಾಜಿ ಪಾಟೀಲ, ಕವಿತಾ ಅಳ್ಳೊಳ್ಳಿ, ಸುವರ್ಣ ಹಳ್ಳಿ, ನಾಗಮ್ಮ ವಾಲಿಕಾರ, ರಾಜೇಶ್ರಿ ತಳವಾರ, ಬಾನು ಹತ್ತರಕಿಹಾಳ, ಸರಸ್ವತಿ ಕಿತ್ತೂರ ಇತರರು ಇದ್ದರು.