ಜನಪ್ರಿಯ ಲೇಖಕರಿಗಿಂತ ಜನಪರ ಲೇಖಕರ ಅಗತ್ಯ: ಮೂಳೆಗಾಂವ
ಕಲಬುರಗಿ,ಸೆ.9-ಓದುಗರನ್ನು ಕೆಣಕುವ, ಬಡವರ ಬವಣೆಯನ್ನು ವಿವರಿಸುವ, ಸತ್ಯವನ್ನು ಪ್ರತಿಪಾದಿಸುವ ಕೃತಿಗಳಿಗೆ ವರ್ತಮಾನದಲ್ಲಿ ಬೆಲೆ ಇರಲಿಕ್ಕಿಲ್ಲ. ಆದರೆ ಒಂದಲ್ಲ ಒಂದು ದಿನ ಭವಿಷ್ಯದಲ್ಲಿ ಬೆಲೆ ಬರುತ್ತದೆ ಎಂದು ಖ್ಯಾತ ಚಿಂತಕಿ ಡಾ. ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಸಮುದಾಯ ಕಲಬುರಗಿ ಹಾಗೂ ಪಲ್ಲವ ಪ್ರಕಾಶನ ಭಾನುವಾರ ಆಯೋಜಿಸಿದ್ದ ಮಹಾಂತೇಶ ನವಲಕಲ್ ಅವರ “ಬುದ್ಧ ಗಂಟೆಯ ಸದ್ದು” ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, 12 ನೇ ಶತಮಾನದ ವಚನಗಳು ವ್ಯವಸ್ಥೆಯನ್ನು ಕೆಣಕ್ಕಿದ್ದರಿಂದ ಇಂದಿಗೂ ಪ್ರಸ್ತುತ ಅನಿಸುತ್ತಿವೆ. ಇಂತಹ ಕೃತಿಗಳನ್ನು ನಾಮಾವಶೇಷ ಮಾಡುವ ಅಪಾಯಗಳೂ ಇವೆ. ಇದಕ್ಕೆ ಸಾಕ್ಷಿ ವಚನ ದರ್ಶನ ಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೃಜನಶೀಲ ಸಾಹಿತ್ಯ ಸಾಂಸ್ಕøತಿಕ ರಾಯಭಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಸುಡು ಸುಡು ವಾಸ್ತವ ಕಟ್ಟಿಕೊಡುವ ಸಂಕಥನ ಇದಾಗಿದೆ ಎಂದರು.
ಕೃತಿ ಬಿಡುಗಡೆ ಮಾಡಿದ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಮಾತನಾಡಿ, ಕನ್ನಡದಲ್ಲಿ ವಿಜ್ಞಾನ, ಕೃಷಿ ಕ್ಷೇತ್ರದ ಬಗ್ಗೆ ಬರೆಯುವವರು ಬಹಳ ವಿರಳ. ಕೃಷಿ ವಿಷಯ ಇಟ್ಟುಕೊಂಡು ನವಲಕಲ್ ಕಥೆಗಳನ್ನು ಹೆಣೆದಿದ್ದಾರೆ ಎಂದು ಹೇಳಿದರು.
ಜನರಿಗೆ ಮುಟ್ಟುವ ಸರಳವಾದ ಕಥೆ, ವಿಮರ್ಶೆ ಬೇಕು. ಜನಪ್ರಿಯ ಲೇಖಕರಿಗಿಂತ, ಜನಪರ ಲೇಖಕರು ಬೇಕು ಎಂದು ಅವರು ಪ್ರತಿಪಾದಿಸಿದರು.
ಪುಸ್ತಕ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ, ಮಹಾಂತೇಶ ನವಲಕಲ್ ಕನ್ನಡದ ಮಹತ್ವದ, ಮುಖ್ಯ ಕಥೆಗಾರರಾಗಿದ್ದು, ಕೃಷಿ ಲೋಕದ ಬಿಕಟ್ಟು, ಅಂತರಾಷ್ಟ್ರೀಯ ರಾಜಕಾರಣದ ಬಗ್ಗೆ ಈ ಕಥಾ ಸಂಕಲನದಲ್ಲಿ ಚಿತ್ರಿಸಿದ್ದಾರೆ ಎಂದರು.
ಮೊದಲು ದೇಶ ಮಾರುಕಟ್ಟೆಯನ್ನು ನಿರ್ವಹಿಸುತ್ತಿತ್ತು. ಈಗ ಮಾರುಕಟ್ಟೆ ದೇಶವನ್ನು ನಿಯಂತ್ರಿಸುತ್ತಿದೆ ಎಂಬುದನ್ನು ತಮ್ಮ ಕಥೆಗಳಲ್ಲಿ ಮನಗಾಣಿಸಿದ್ದಾರೆ. ಮಾಹಿತಿ ಕಥೆಯಾಗುವುದಿಲ್ಲ. ದೂರದೃಷ್ಟಿ ಇರಬೇಕು ಎಂಬ ಪಿಕಾಷೋ ಅವರ ಮಾತಿನಂತೆ, ನವಲಕಲ್ ಅವರು ಆಯ್ಕೆ ಮಾಡಿಕೊಂಡ ವಸ್ತು, ವಿಷಯ ಬಹಳ ವಿಭಿನ್ನವಾಗಿದೆ ಎಂದು ತಿಳಿಸಿದರು.
ಬುದ್ಧನ ತತ್ವಗಳು, ಶರಣರ ವಚನಗಳು, ತತ್ವ ಪದಗಳು ಈ ಮೂರು ವಿಚಾರಗಳನ್ನು ತಮ್ಮ ಕಥೆಯ ಘಟನೆ, ಪಾತ್ರದಲ್ಲಿ ಬಳಸುವ ಇವರು, ರೈತರ ತೊಳಲಾಟ, ಪಾಪಪ್ರಜ್ಞೆ, ಬಿಡುಗಡೆಯ ಹೋರಾಟ, ಮನುಷ್ಯರ ನೈತಿಕ ಬಿಕ್ಕಟ್ಟುಗಳನ್ನು ತಮ್ಮ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ ಎಂದರು.
ಲೇಖಕ ಮಹಾಂತೇಶ ನವಲಕಲ್, ಪ್ರಕಾಶಕ ಪಲ್ಲವ ವೆಂಕಟೇಶ ಮಾತನಾಡಿದರು. ಪ್ರಗತಿಪರ ಚಿಂತಕ ಪೆÇ್ರ. ಆರ್.ಕೆ. ಹುಡಗಿ ಅಧ್ಯಕ್ಷತೆ ವಹಿಸಿದ್ದರು.
ಡಾ.ಅಪ್ಪಗೆರೆ ಸೋಮಶೇಖರ, ರಮೇಶ ಮಾಡ್ಯಾಳೆ, ಡಾ.ಶ್ರೀಶೈಲ ಘೂಳಿ, ಬಿ.ಆರ್.ಬುದ್ಧಾ, ಡಾ.ದತ್ತಾತ್ರೇಯ ಇಕ್ಕಳಕಿ, ಡಾ.ಅಶೋಕ ಶೆಟಗಾರ ಇತರರಿದ್ದರು. ಮಹಿಪಾಲರಡ್ಡಿ ಮುನ್ನೂರ್ ನಿರೂಪಿಸಿದರು.