ಗುರು ಗ್ರಂಥ ಸಾಹಿಬ್ ಪ್ರಕಾಶ್ ಉತ್ಸವ-ಧಾರ್ಮಿಕ ಕಾರ್ಯಕ್ರಮ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.09:- ಸಿಖ್ ಸಮುದಾಯದಿಂದ ಕೆಆರ್‍ಎಸ್ ರಸ್ತೆಯ ಗುರುದ್ವಾರ ಶ್ರೀಗುರುಸಿಂಗ್ ಸಭಾದಲ್ಲಿ ಭಾನುವಾರ ಗುರು ಗ್ರಂಥ ಸಾಹಿಬ್ ಪ್ರಕಾಶ್ ಉತ್ಸವ ನಡೆಯಿತು. ಮುಖಂಡರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಬೆಂಗಳೂರಿನ ತಂಡ ಹಾಗೂ ಮೈಸೂರಿನ ದರ್ಶನ್ ಸಿಂಗ್ ತಂಡದ ಸದಸ್ಯರು ಕೀರ್ತನೆಗಳನ್ನು ಹಾಡಿದರು. ಸಮುದಾಯದ ಸದಸ್ಯರು ದನಿಗೂಡಿಸಿದರು. ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೌರವಿಸಲಾಯಿತು.
ಬಳಿಕ ಮಾತನಾಡಿದ ಅವರು, ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ ಎಂಬುದಕ್ಕೆ ಈ ಕಾರ್ಯಕ್ರಮ ಉತ್ತಮ ನಿದರ್ಶನ. ಸಿಖ್ ಧರ್ಮ ದೇಶಕ್ಕೆ ನೀಡಿದ ಸೇವೆ ಅಪರಿಮಿತ. ಅವರು ಮೈಸೂರಿನಲ್ಲಿ ನೆಲೆಸಿ, ತಮ್ಮ ಕೆಲಸದ ನಡುವೆಯೂ ಸಮುದಾಯದ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯಕ್ರಮವನ್ನು ಸಂಘಟಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ದೇಶದಲ್ಲಿ ಸಹೋದರತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ವಿಕಸಿತ ಹಾಗೂ ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಭ್ರಾತೃತ್ವ ಭಾವನೆಯನ್ನು ಬೆಳೆಸಿಕೊಂಡು ನಮ್ಮ ಸಂಸ್ಕೃತಿಯ ಮೌಲ್ಯ ಎತ್ತಿ ಹಿಡಿಯುವ ಕಾರ್ಯ ಮಾಡೋಣ ಎಂದು ಸಲಹೆ ನೀಡಿದರು.
ಸಮುದಾಯದ ಮುಖಂಡರಾದ ಸುಖವಿಂದರ್ ಸಿಂಗ್, ಹರ್‍ಪ್ರೀತ್ ಸಿಂಗ್, ಜಸ್‍ಬಿರ್ ಸಿಂಗ್, ಮನ್‍ಪ್ರೀತ್ ಕೌರ್ ಭಾಗವಹಿಸಿದ್ದರು.