ನೆರೆ ಹಾವಳಿ ಪ್ರದೇಶಕ್ಕೆ ಡಿ.ಸಿ ಭೇಟಿ,ಬೆಳೆ ಹಾನಿ ಪರಿಶೀಲನೆ
ಕಲಬುರಗಿ:ಸೆ.8: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ರವಿವಾರ ಸೇಡಂ ತಾಲೂಕಿನ ಮಳಖೇಡ್ ಗ್ರಾಮಕ್ಕೆ ಭೇಟಿ ನೀಡಿ ನೆರೆ ಹಾವಳಿಯಿಂದ ಹಾನಿಗೊಳಗಾದ ಬೆಳೆ ಹಾನಿ ಪರಿಶೀಲಿಸಿದರು.
ನೆರೆ ಹಾವಳಿಯಿಂದ ತತ್ತರಿಸಿದ ಪ್ರತಿಯೊಂದು ಹೊಲಕ್ಕೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ಕೈಗೊಂಡು ಕೂಡಲೆ ವರದಿ ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ ಶ್ರೇಯಾಂಕಾ ಧನಶ್ರೀ ಅವರಿಗೆ ಸೂಚಿಸಿದರು.
ಇದಕ್ಕು ಮುನ್ನ ಜಿಲ್ಲಾಧಿಕಾರಿಗಳು ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಿ ಇತ್ತೇಚೆಗೆ ಲೋಕಾರ್ಪಣೆಗೊಳಿಸಿದ ಮಳಖೇಡ್ ಸೇತುವೆ, ಮಳೆಯಿಂದ ಕುಸಿದ ಮಳಖೇಡ್ ಕೋಟೆ ವೀಕ್ಷಿಸಿದರು. ಮಳಖೇಡ್ ಗ್ರಾಮದಲ್ಲಿ ಮಳೆಯಿಂದ ಕುಸಿದ ಮನೆಯೊಂದಕ್ಕೂ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದೆಂದರು.
ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತಾಲೂಕ ಪಂಚಾಯತ್ ಇ.ಓ ಚೆನ್ನಪ್ಪ ರಾಯಣ್ಣನವರ, ಸಹಾಯಕ ಕೃಷಿ ನಿರ್ದೇಶಕ ಹಂಪಣ್ಣ ಸೇರಿದಂತೆ ಅನೇಕ ಅಧಿಕಾರಿಗಳಿದ್ದರು.