ಯೆಯ್ಯಾಡಿ ಬಳಿ ತಡರಾತ್ರಿ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು
ಮಂಗಳೂರು, ಸೆ.೬: ಗುರುವಾರ ಮಧ್ಯರಾತ್ರಿಯ ನಂತರ ಸಂಭವಿಸಿದ ಭೀಕರ ಅಪಘಾತದಲ್ಲಿ ಯೆಯ್ಯಾಡಿ ಬಳಿ ಬೈಕ್ ಸ್ಕಿಡ್ ಆಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಶಕ್ತಿನಗರದ ಚಾಲುಕ್ಯ ಬಾರ್‌ನಲ್ಲಿ ಪಾಳಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ಬೆಳಗಿನ ಜಾವ ೨:೩೦ರ ಸುಮಾರಿಗೆ ಈ ಘಟನೆ ನಡೆದಿದೆ.
ಮೃತರನ್ನು ರಾಮಕುಂಜ ನಿವಾಸಿ ಚೇತನ್ (೨೧) ಮತ್ತು ಉರ್ವಾ ಸ್ಟೋರ್‌ನ ಕಾಶಿ (೧೭) ಎಂದು ಗುರುತಿಸಲಾಗಿದೆ.
ಅವರು ಮೂರು ಪ್ರತ್ಯೇಕ ಬೈಕ್‌ಗಳಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದರು. ಯೆಯ್ಯಾಡಿ ಸಮೀಪಕ್ಕೆ ಬರುತ್ತಿದ್ದಂತೆ ಬೈಕ್ ಒಂದರಲ್ಲಿ ಸಮತೋಲನ ತಪ್ಪಿ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.
ಚೇತನ್ ಮತ್ತು ಕಾಶಿ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೂ ಗಂಭೀರ ಗಾಯಗೊಂಡಿದ್ದ ಅವರು ಬದುಕುಳಿಯಲಿಲ್ಲ. ಮುಂದಿನ ಪ್ರಕ್ರಿಯೆಗಾಗಿ ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಘಟನೆ ಸಂಬಂಧ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಪಘಾತದಲ್ಲಿ ಮೃತಪಡುತ್ತಿರುವವರ ಸಂಖ್ಯೆ ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದ್ದರು. ಯುವಜನರು ಅಪಘಾತದಲ್ಲಿ ಹೆಚ್ಚಾಗಿ ಜೀವ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ.