ಪ್ರವಚನ, ಸಿದ್ಧಾಂಥ ಶಿಖಾಮಣಿ ಗ್ರಂಥ ಅರ್ಪಣೆ ಸಮಾರೋಪ ಶೀಘ್ರ
ಬೀದರ್: ಸೆ.4:ನಗರದಲ್ಲಿ ಶೀಘ್ರದಲ್ಲೇ ಶ್ರಾವಣ ನಿಮಿತ್ತ ಹಮ್ಮಿಕೊಂಡಿದ್ದ ಶಿವ ಧರ್ಮ ದರ್ಶನ ಸಂಚಾರ ಪ್ರವಚನ, ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಅರ್ಪಣೆ ಸಮಾರೋಪ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದ್ದಾರೆ.
ಬೇಮಳಖೇಡ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಶಿವ ಧರ್ಮ ದರ್ಶನ ಸಂಚಾರ ಪ್ರವಚನ ಯಶಸ್ವಿಯಾಗಿ ನಡೆಸಿದ್ದಾರೆ. ತಮ್ಮ ವತಿಯಿಂದ ಕೇಂದ್ರ ಸಚಿವರು, ಸಂಸದರು, ರಾಜ್ಯದ ಸಚಿವರು, ವಿದೇಶಿ ರಾಯಭಾರಿಗಳು, ಉನ್ನತ ಅಧಿಕಾರಿಗಳು ಸೇರಿದಂತೆ ಒಟ್ಟು 1,008 ಜನರಿಗೆ ಸಿದ್ಧಾಂತ ಶಿಖಾಮಣಿ ಗ್ರಂಥ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಮಾರೋಪ ಸಮಾರಂಭಕ್ಕೆ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಶ್ರೀಶೈಲ ಜಗದ್ಗುರುಗಳಿಗೆ ಆಹ್ವಾನ: ನಗರದಲ್ಲಿ ಹಮ್ಮಿಕೊಳ್ಳಲಿರುವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಶ್ರೀಶೈಲದಲ್ಲಿ ಶಿವಯ್ಯ ಸ್ವಾಮಿ ಅವರ ನೇತೃತ್ವದಲ್ಲಿ ಜಗದ್ಗುರು ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಆಹ್ವಾನ ನೀಡಲಾಯಿತು.
ಆಹ್ವಾನ ಒಪ್ಪಿಕೊಂಡ ಜಗದ್ಗುರುಗಳು, ಕಾರ್ಯಕ್ರಮ ಪಾಲ್ಗೊಳ್ಳಲು ಬೀದರಗೆ ಬರುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಪ್ರವೀಣ್ ಸ್ವಾಮಿ, ನಾಗರಾಜ ಮಠ, ಶಿವಶಂಕರ ಬೆಮಳಗಿ ಮತ್ತಿತರರು ಇದ್ದರು.
ಬದುಕಿನ ಸಾರ್ಥಕತೆಯ ಸೂತ್ರಗಳನ್ನು ಒಳಗೊಂಡ ಶ್ರೀ ಸಿದ್ಧಾಂಥ ಶಿಖಾಮಣಿ ಗ್ರಂಥವನ್ನು ದೇಶ, ವಿದೇಶಕ್ಕೆ ತಲುಪಿಸಲು ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಿವಯ್ಯ ಸ್ವಾಮಿ
ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿ ಸದಸ್ಯ