ಅನಾರೋಗ್ಯ ರಕ್ಷಣೆಗಾಗಿ ಕಸ ಸಂಗ್ರಹ, ನಿರ್ವಹಣೆ ಪರಿಣಾಮಕಾರಿಯಾಗಿರಲಿ; ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ.4;- ನಾವು ಆರೋಗ್ಯವಾಗಿರಲು ನಮ್ಮ ಮನೆ, ಮನಸ್ಸು ಸದಾ ಸ್ವಚ್ಚವಾಗಿರಬೇಕು. ಅದೇ ರೀತಿ ನಮ್ಮ ಪರಿಸರವು ಸದಾ ಸ್ವಚ್ಚವಾಗಿರಬೇಕಾಗಿದ್ದು ಇದಕ್ಕಾಗಿ ಕಸ ಸಂಗ್ರಹ ಹಾಗೂ ನಿರ್ವಹಣೆಯನ್ನು ಅಧಿಕಾರಿಗಳು ಎಚ್ಚೆತ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು. ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ, ದಾವಣಗೆರೆ ಇವರ ಸಹಯೋಗ ದಲ್ಲಿ ನಗರದ ಹೋಟೆಲ್ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್‍ನಲ್ಲಿ ಆಯೋಜಿಸಿಲಾಗಿದ್ದ ನೀರಿನ ನಿರ್ವಹಣೆ ಕುರಿತು ಏರ್ಪಡಿಸಲಾದ ಕಾರ್ಯಾಗಾರ ಉದ್ಘಾಟಿಸಿ ಮಾತಾನಾಡಿದರು. ನಮ್ಮ ದಾವಣಗೆರೆ ನಗರ ಸ್ವಚ್ಚವಾಗಿಡಲು ಎಲ್ಲರೂ ನಾಗರಿಕರು ಕೈಜೋಡಿಸಬೇಕು, ಸ್ವಚ್ಚ ಸರ್ವೇಕ್ಷಣೆಯಲ್ಲಿ ರಾಜ್ಯದಲ್ಲಿರುವ 10 ಮಹಾನಗರಪಾಲಿಕೆಗಳ ಪೈಕಿ ದಾವಣಗೆರೆ 4 ನೇ ಸ್ಥಾನವನ್ನು ಪಡೆದಿದೆ. `ನನ್ನ ಜೀವನ, ನನ್ನ ಸ್ವಚ್ಚ ನಗರ` ಈ ಕಾರ್ಯಕ್ರಮವನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿ ರಾಜ್ಯದ 6 ನಗರಗಳಲ್ಲಿ ನಮ್ಮ ದಾವಣಗೆರೆಯೂ ಕೂಡ ಒಂದಾಗಿದೆÉ ಎಂಬುವುದು ಹೆಮ್ಮೆಯ ವಿಷಯ, ಇನ್ನೂ ಪರಿಣಾಮಕಾರಿಯಾಗಿಸಲು ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ದಾವಣಗೆರೆ ನಗರವನ್ನು ಸ್ವಚ್ಚವಾಗಿಡಲು ಪ್ರಯತ್ನಿಸಬೇಕು ಎಂದರು.ಸಾರ್ವಜನಿಕರಿಗೆ ಹಸಿಕಸ, ಒಣಕಸವನ್ನು ಬೇರ್ಪಡಿಸಬೇಕೆಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು. ಖಾಲಿ ನಿವೇಶನದಲ್ಲಿ ಕಸ ಹಾಕುವುದರಿಂದ ಆ ಕಸವನ್ನು ಪ್ರಾಣಿಗಳು ತಿನ್ನುತ್ತವೆ. ಚಾನಲ್, ಚರಂಡಿಗಳಲ್ಲಿ ಕಸವನ್ನು ಹಾಕುತ್ತಿರುವ ಜನರಿಗೆ ಜಾಗೃತಿ ಮೂಡಿಸಬೇಕು. ಹಾಳು ಬಿದ್ದ ಕಟ್ಟಡ ಮಾಲೀಕರನ್ನು ಗುರುತಿಸಿ ಅದನ್ನು ಕೆಡವಿ ಅದರ ಸುತ್ತ ಕೌಂಪೌಂಡ್ ಕಟ್ಟಬೇಕು. ಬೀದಿಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ರಸ್ತೆಗಳಲ್ಲಿ ಜನರು ಓಡಾಡಲು ಸ್ಥಳವೇ ಇಲ್ಲದ ಹಾಗೇ ವ್ಯಾಪಾರ ಮಾಡುತ್ತಾ ಇರುತ್ತಾರೆ, ಆಸ್ಪತ್ರೆಯ ಹತ್ತಿರ ಇರುವ ಬೀದಿಬದಿ ವ್ಯಾಪಾರಸ್ಥರು ಅವರ ಅಂಗಡಿಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವಂತೆ ನೋಡಿಕೊಂಡು ಅಂಗಡಿ ಮುಚ್ಚಲು ಸಮಯವನ್ನು ನಿಗಧಿಮಾಡಲು ತಿಳಿಸಿದರು.ಆಶಾಕಾರ್ಯಕರ್ತೆಯರು ಕಸದಿಂದ ರಸವೆಂಬ ಕಾರ್ಯಕ್ರಮವನ್ನು ಮಾಡುತ್ತಿದ್ದು, ಅವರನ್ನು ನಮ್ಮೊಂದಿಗೆ ಜೊತೆಯಾಗುವಂತೆ ತಿಳಿಸಿಬೇಕು. ಗ್ರಾಮೀಣ ಪ್ರದೇಶದಲ್ಲಿರುವ ಪಿಡಿಓ ಅವರು ಆರೋಗ್ಯ ಇಲಾಖೆಯಿಂದ 3 ತಿಂಗಳಗೊಮ್ಮೆ ನೀರನ್ನು ಪರಿಶೀಲಿಸಬೇಕು. ಕಸದ ಗಾಡಿಗಳಲ್ಲಿ ತುಂಬಿದ ಕಸವನ್ನು ರಸ್ತೆಗಳಲ್ಲಿ ಬೀಳಿಸುತ್ತಾ ಹೋಗುತ್ತಾರೆ, ಇದರ ಬಗ್ಗೆ ಪಾಲಿಕೆ ಅಧಿಕಾರಿಗಳು ಗಮನಿಸಬೇಕೆಂದು ತಿಳಿಸಿ 43 ನೇ ವಾರ್ಡ್ ಜೆ.ಹೆಚ್ ಪಟೇಲ್ ಬಡಾವಣೆಯ ಉದ್ಯಾನವನವನ್ನು ಸ್ವಚ್ಚ ಕಲಿಕಾ ಕೇಂದ್ರವನ್ನಾಗಿ ಮಾಡಬೇಕೆಂದರು.