ಮನೆ ಬೀಗ ಮುರಿದು 1.40 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು
ಕಲಬುರಗಿ,ಸೆ.3-ಮನೆ ಬೀಗ ಮುರಿದು 1.40 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಸ್ವರಗೇಟ್ ನಗರದಲ್ಲಿ ನಡೆದಿದೆ.
ಶಶಿಕಾಂತ ವಾಡಿ ಎಂಬುವವರ ಮನೆ ಬೀಗ ಮುರಿದು 84 ಸಾವಿರ ರೂ.ಮೌಲ್ಯದ 30 ಗ್ರಾಂ.ಬಂಗಾರದ ಮಂಗಳಸೂತ್ರ, 28 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಎರಡು ಎಳೆಯ ಚೈನ್, 28 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಬ್ರಾಸಲೇಟ್ ಸೇರಿ 1.40 ಲಕ್ಷ ರೂ.ಮೌಲ್ಯದ 50 ಗ್ರಾಂ.ಬಂಗಾರದ ಆಭರಣ ಕಳವು ಮಾಡಲಾಗಿದೆ.
ಅಪೆಕ್ಸ್ ಬ್ಯಾಂಕನ ನೇಮಕಾತಿ ಪರೀಕ್ಷೆ ಇರುವ ಪ್ರಯುಕ್ತ ಶಶಿಕಾಂತ ಅವರು ತಂದೆ-ತಾಯಿಯನ್ನು ಮನೆಯಲ್ಲಿ ಬಿಟ್ಟು ಆ.31 ರಂದು ರಾತ್ರಿ ಬೆಂಗಳೂರಿಗೆ ಹೋಗಿದ್ದರು. ಸ್ವ-ಗ್ರಾಮವಾದ ಆಳಂದ ತಾಲ್ಲೂಕಿನ ಸಾವಳಗಿ (ಕೆ) ಗ್ರಾಮದಲ್ಲಿರುವ ಜಮೀನಿನಲ್ಲಿ ಬೆಳೆದ ಹೂವಿನ ಕಟಾವಿನ ಸಂಬಂಧ ಇವರ ತಂದೆ ತಾಯಿ ಸೆ.1 ರಂದು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕಳ್ಳರು ಮನೆ ಬೀಗ ಮುರಿದು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.