ಅಲ್ಲಮ ಪ್ರಭು ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ : ಅಮರವಾಡಿ
ಸಂಜೆವಾಣಿ ವಾರ್ತೆ
ಔರಾದ : ಸೆ.೩:ಭಕ್ತಿ-ವೈರಾಗ್ಯದ ಮೂಲಕ ಶರಣ ಸಂಕುಲಕ್ಕೆ ಬದುಕಿನ ಸತ್ಯವನ್ನು ಬೋಧಿಸಿದ ಅಲ್ಲಮ ಈ ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ ಎಂದು ಶಿಕ್ಷಕ, ಪ್ರವಚನಕಾರ ಬಿ.ಎಂ ಅಮರವಾಡಿ ನುಡಿದರು.
ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಭಾನುವಾರ ಶ್ರಾವಣ ಮಾಸದ ನಿಮಿತ್ತ ಬಸವ ಮಂಟಪದಲ್ಲಿ ಒಂದು ತಿಂಗಳುಗಳ ಕಾಲ ನಡೆಯುತ್ತಿರುವ ಅಲ್ಲಮಪ್ರಭು ವಚನ-ನಿರ್ವಚನ ಪ್ರವಚನದಲ್ಲಿ ಮಾತನಾಡಿದ ಅವರು, ಅನುಭಾವದಿಂದ ಹಿರಿಯರಾಗಿದ್ದ ಅಲ್ಲಮರನ್ನು ಬಿಟ್ಟು ವಚನ ಚಳುವಳಿ ಊಹಿಸಲು ಸಾಧ್ಯವಿಲ್ಲ.
ಅಲ್ಲಮ ಪ್ರಭುಗಳಿಗೆ ಎಲ್ಲ ಸಾಹಿತ್ಯದ ತಲಸ್ಪರ್ಶಿ ಜ್ಞಾನವಿರುವುದರಿಂದಲೇ ಬದುಕಿನ ಕಠೋರ ಸತ್ಯವನ್ನು ಜನರೆದುರಿಗೆ ತಂದಿರುವುದನ್ನು ನೋಡುತ್ತೆವೆ. ನೇರ ನಿಷ್ಠುರತನಕ್ಕೆ ಪ್ರಸಿದ್ದರಾದ ಅಲ್ಲಮ ಬದುಕಿನ ವಾಸ್ತವಿಕತೆ ಪರಿಶೀಲಿಸಿ ನೋಡಿರುವುದು ಅವರ ವಚನಗಳಿಂದ ಕಂಡು ಬರುತ್ತದೆ. ಸೋಲ್ಲಾಪುರದ ಸಿದ್ದರಾಮೇಶ್ವರ, ಮಹಾಪ್ರಸಾದಿ ಮರುಳ ಶಂಕರದೇವರAಥ ಶರಣರನ್ನು ಗುರುತಿಸಿ ಕಲ್ಯಾಣ ಬೆಳಗುವಂತೆ ಮಾಡಿದ್ದು ಅಲ್ಲಮ ಪ್ರಭುದೇವರು ಎಂದರು.
ಸ್ತ್ರೀ ಸಮಾನತೆಗೆ ಮಹತ್ವ ನೀಡಿದ ಅಲ್ಲಮರು ಹೆಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ ಎಂಬುದರ ಮೂಲಕ ಗಂಡು ಹೆಣ್ಣಿನಲ್ಲಿ ಸುಳಿವ ಆತ್ಮ ಒಂದೇ ಎಂದು ತಿಳಿಸಿದರು. ಅಷ್ಟಾವರಣದಲ್ಲಿ ಬರುವ ಗುರು, ಲಿಂಗ, ಜಂಗಮ, ದಾಸೋಹದ ಬಗ್ಗೆ ತಮ್ಮ ವಚನಗಳಲ್ಲಿ ಅದ್ಭುತ ಮೌಲ್ಯಗಳನ್ನು ಹಿಡಿದಿಟ್ಟಿದ್ದಾರೆ. ಚಾಮರಸ ವಿರಚಿತ ಪ್ರಭುಲಿಂಗ ಲೀಲೆ ಅಲ್ಲಮನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದರು.
ಶರಣ ಪರಂಪರೆಯ ಜೀವಾಳ ಕಾಯಕ ಸಂಸ್ಕೃತಿ. ಕಾಯಕ ಸಂಸ್ಕೃತಿ ಪೋಷಿಸಿದ ಬಸವಣ್ಣನವರು ಕಾಯಕ ಪ್ರಧಾನ ಸಮಾಜ ಕಟ್ಟಲು ಬಯಸಿದ್ದರೇ ಹೊರತು ಜಾತಿಪ್ರಧಾನ ಸಮಾಜ ಅಲ್ಲ. ಅಲ್ಲಮ ಜ್ಞಾನಿಯನ್ನು ಶೂನ್ಯ ಪೀಠಾಧ್ಯಕ್ಷರನ್ನಾಗಿ ಮಾಡಿ ಅವರ ಜ್ಞಾನಕ್ಕೆ, ಅನುಭಾವ ಮತ್ತು ತರ್ಕಗಳಿಗೆ ಮನ್ನಣೆ ನೀಡಿದ್ದು ಬಸವಣ್ಣನವರ ಹಿರಿಮೆ. ಬಸವಣ್ಣನವರ ಬದುಕು ನಮ್ಮೆಲ್ಲರಿಗೂ ಆದರ್ಶ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಮನ್ಮತಪ್ಪ ಹುಗ್ಗೆ, ಕಲ್ಲಪ್ಪ ಹುಗ್ಗೆ, ಬಾಬುರಾವ ವಡಮುರ್ಗೆ, ಬಸವಣಪ್ಪ ಡೋಣಗಾವೆ, ಮಲ್ಲಿಕಾರ್ಜುನ ವಡಮುರ್ಗೆ, ಶ್ರೀಕಾಂತ ನಾಗೂರೆ, ಸಂತೋಷ ಬಾಬುರಾವ, ಶಿವಕುಮಾರ್ ಬಿರಾದಾರ್, ಬಸವರಾಜ ಬಿರಾದಾರ್, ದತ್ತು ಪಂಚಾಳ, ಶರಣಪ್ಪ, ಬಸವರಾಜ ಬಿರಾದಾರ್, ನೆಹರು ಚಿದ್ರೆ, ಅಶೋಕ ಹುಗ್ಗೆ ಸೇರಿದಂತೆ ಇನ್ನಿತರರಿದ್ದರು.