ಸಿದ್ದಸಿರಿ ಹೆಸರಿನಲ್ಲಿ ಯತ್ನಾಳ ಅವರನ್ನು ದಾರಿ ತಪ್ಪಿಸಿದ ಜಾಧವ ಕುಟುಂಬ: ಮೋತಕಪಳ್ಳಿ
ಚಿಂಚೋಳಿ,ಸೆ.1- ಪಟ್ಟಣದ ಹೊರವಲಯದಲ್ಲಿ ಇರುವ ಸಿದ್ದಸಿರಿ ಇಥೆನಾಲ್ ಕಾರ್ಖಾನೆ ಬಂದ್ ಆಗಲು ಶಾಸಕ ಡಾ.ಅವಿನಾಶ್ ಜಾಧವ್ ಹಾಗೂ ಅವರ ತಂದೆ ಡಾ.ಉಮೇಶ್ ಜಾಧವ್ ಅವರೇ ಕಾರಣರಾಗಿದ್ದಾರೆ ಎಂದು ಚಿಂಚೋಳಿಯ ಬ್ಲಾಕ್ ಕಾಂಗ್ರೆಸನ ವಕ್ತಾರರಾದ ಶರಣು ಪಾಟೀಲ ಮೊತಕಪಳ್ಳಿ ತಿರುಗೇಟು ನೀಡಿದ್ದಾರೆ.
ಚಿಂಚೋಳಿಯಲ್ಲಿ ಶಾಸಕ ಡಾ.ಅವಿನಾಶ ಜಾಧವ ಅವರನ್ನು ಒಳಗೊಂಡ ರೈತ ಹಿತ ರಕ್ಷಣಾ ಸಂಘದಿಂದ ನಡೆದ ಚಿಂಚೋಳಿ ಬಂದ್ ಪ್ರತಿಭಟನೆಯ ಬಗ್ಗೆ ಪತ್ರಿಕೆ ಪ್ರಕಟಣೆ ಹೊರಡಿಸಿದ ಶರಣು ಪಾಟೀಲ ಮೋತಕಪಳ್ಳಿ, ನಾವು ಅಪ್ಪ ಮಗ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಕಾಲು ಬಿದ್ದು ಕಾರ್ಖಾನೆ ಪ್ರಾರಂಭ ಮಾಡಿದ್ದೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಯತ್ನಾಳ್ ಅವರ ಕಾಲು ಬೀಳುವುದರಲ್ಲಿ ಇವರ ಸ್ವಾರ್ಥ ಅಡಗಿತ್ತೇ ವಿನಃ ರೈತರ ಕಾಳಜಿ ಅಲ್ಲ, ಹಾಗೇನಾದರೂ ಡಾ. ಉಮೇಶ್ ಜಾಧವ ಅವರಿಗೆ ಕಾರ್ಖಾನೆ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ನಿಮ್ಮದೇ ಕೇಂದ್ರ ಸರಕಾರ ಕಾರ್ಖಾನೆ ಮೇಲೆ ಒಂದೂವರೆ ಕೋಟಿ ದಂಡ ವಿಧಿಸಿತ್ತಲ್ಲ ಅವಾಗ ಪ್ರಧಾನಿ ಮೋದಿ ಅವರ ಕಾಲು ಬಿದ್ದು ಆ ದಂಡವನ್ನು ಮನ್ನಾ ಮಾಡಿಸಬೇಕಿತ್ತು ಏಕೆ ಮಾಡಲಿಲ್ಲ? ಇದೆಲ್ಲ 2023 ರ ವಿಧಾನ ಸಭೆ ಚುನಾವಣೆ ಗೆಲ್ಲಲು ನೀವು ಚಿಂಚೋಳಿ ರೈತರಿಗೆ ಹಾಗೂ ಯತ್ನಾಳ ಅವರಿಗೆ ಮಾಡಿದ ಮೋಸ ಅಷ್ಟೇ ಎಂದು ಅವರು ಹೇಳಿದ್ದಾರೆ.
ಮೊದಲು ಕಾರ್ಖಾನೆ ಪ್ರಾರಂಭ ಮಾಡಿ. ಚುನಾವಣೆ ಪ್ರಚಾರದಲ್ಲಿ ಇಥೆನಾಲ್ ಕಾರ್ಖಾನೆ ನಾವೇ ಪ್ರಾರಂಭ ಮಾಡಿದ್ದೇವೆ ಎಂದು ಚಿಂಚೋಳಿ ಮತಕ್ಷೇತ್ರದ ರೈತರಿಗೆ ನಂಬಿಸಿ ಮತ ಪಡೆಯುವ ಉದ್ದೇಶದಿಂದ ಪರವಾನಗಿ ಪಡೆಯದೆ ಶಾಸಕರ ಸ್ವಾರ್ಥಕ್ಕಾಗಿ ತಾರಾತುರಿಯಲ್ಲಿ ಯತ್ನಾಳ ಅವರ ಮೇಲೆ ಒತ್ತಡ ಹೇರಿ ಕಾನೂನು ಪ್ರಕ್ರಿಯೆಗಳನ್ನು ಪಾಲನೆ ಮಾಡಲು ಬಿಡದೆ ಅವರ ಮೇಲೆ ಒತ್ತಡ ತಂದು ಕಾರ್ಖಾನೆ ಪ್ರಾರಂಭ ಮಾಡಿಸಿದ್ದೀರಿ.
ಇಂದು ಕಾನೂನಿನ ತೊಡಕಿನಿಂದ ಕಾರ್ಖಾನೆ ಬಂದ್ ಆಗಲು ಶಾಸಕ ಅವಿನಾಶ್ ಜಾಧವ್ ಅವರ ಕುಟುಂಬದ ಸ್ವಾರ್ಥವೇ ನೇರ ಕಾರಣವಾಗಿದೆ. ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಾನು ಚಿಂಚೋಳಿಗೆ ವ್ಯವಹಾರ ಮಾಡಲು ಬಂದಿದ್ದೇನೆ ಯಾರ ಮೇಲು ಉಪಕಾರ ಮಾಡಲು ಬಂದಿಲ್ಲ, ರಾಜಕೀಯ, ಪಕ್ಷ ಅನ್ನುವ ಚಪ್ಪಲಿ ಹೊರಗೆ ಬಿಟ್ಟು ಒಳಗೆ ಬರಬೇಕು ಎಂದು ಹೇಳಿದ್ದು ಎಲ್ಲರೂ ಕೇಳಿದ್ದಿವಿ. ಯತ್ನಾಳ್ ಅವರು ಅವರ ಪ್ರಯತ್ನದಿಂದ ಕಾನೂನಿನ ಪ್ರಕಾರ ಕಾರ್ಖಾನೆ ಪ್ರಾರಂಭ ಮಾಡುತ್ತಿದ್ದರು, ನಿಮ್ಮ ಒತ್ತಡ ಮಾತುಗಳಿಗೆ ನಂಬಿ ಪರವಾನಗಿ ಇಲ್ಲದೆ ಕಬ್ಬು ನುರಿಸಿ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೆ ಕಾರ್ಖಾನೆ ಪ್ರಾರಂಭ ಮಾಡಿ ಇಂದು ಸಮಸ್ಸೆ ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಶಾಸಕರೇ ನೇರ ಹೊಣೆ.
ಪ್ರತಿಭಟನೆಯಿಂದ ಕಾರ್ಖಾನೆ ಪ್ರಾರಂಭ ಆಗೋದಿಲ್ಲ ಬದಲಾಗಿ ನಿಯಮಬದ್ಧ ದಾಖಲೆ, ಹಾಗೂ ವಿವಿಧ ಇಲಾಖಾ ಅನುಮತೀಯಿಂದ ಪ್ರಾರಂಭ ಆಗುತ್ತೆ ಅನ್ನುವ ವಿಚಾರ ಗೊತ್ತಿದ್ದು ಶಾಸಕರು ಮತ್ತೊಮ್ಮೆ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುವದು ಸರಿಯಲ್ಲ.
ಒಂದು ಕಾರ್ಖಾನೆ ಪ್ರಾರಂಭ ಮಾಡಬೇಕಾದರೆ ಹಲವು ಇಲಾಖೆಗಳ ಪರವಾನಗಿ ಬೇಕು ಶಾಸಕರಿಗೆ ಇದೆಲ್ಲಾ ಗೊತ್ತಿಲ್ಲವೇ? ಪುರಸಭೆ ಪರವಾನಗಿ ಇಲ್ಲದೆ ಹಲವು ಕಟ್ಟಡಗಳನ್ನು ಕಟ್ಟಲಾಗುತ್ತಿದೆ ನಾಳೆ ಕಾರ್ಮಿಕರಿಗೆ, ಮಕ್ಕಳಿಗೆ ಹೆಚ್ಚು ಕಮ್ಮಿ ಆದರೆ ಯಾರು ಜವಾಬ್ದಾರರು? ಪುರಸಭೆಯ ಹಲವು ವರುಷಗಳ ಕಂದಾಯ ಬಾಕಿ ಇದೆ ಇದರ ಬಗ್ಗೆ ಯಾಕೆ ಮಾತನಾಡಲ್ಲ? ಭೂಮಿ ಕಳೆದುಕೊಂಡ ಹಾಗೂ ಸ್ಥಳೀಯರಿಗೆ ಎಷ್ಟು ರೈತರಿಗೆ ಕಾರ್ಖಾನೆಯಲ್ಲಿ ನೌಕರಿ ಕೊಡಿಸಿದ್ದೀರಿ ಹೇಳಿ ಕಾರ್ಖಾನೆಯಲ್ಲಿ ಕಬ್ಬು ಮಾರಾಟವಾಗುತ್ತದೆ ಎನ್ನುವ ಒಂದು ವಿಷಯ ಮುಂದಿಟ್ಟುಕೊಂಡು ರೈತರಿಗೆ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ದಾರಿ ತಪ್ಪಿಸುವಲ್ಲಿ ಜಾಧವ ಕುಟುಂಬ ಯಶಸ್ವಿ ಆಗಿದೆ.
ಶಾಸಕರು ಕಳೆದ ವಿಧಾನಸಭೆ ಚುನಾವಣೆ ಗೆಲ್ಲಲು ಎಲ್ಲಾ ಅಪೂರ್ಣ ಕೆಲಸಗಳನ್ನೇ ಉದ್ಘಾಟನೆ ಮಾಡಿದ್ದಾರೆ. ಸಿದ್ದಸಿರಿ ಕಾರ್ಖಾನೆ, ತಹಸೀಲ್ ಕಟ್ಟಡ, ಬಸವೇಶ್ವರ ಮೂರ್ತಿ, ಅಂಬಿಗರ ಚೌಡಯ್ಯ ಮೂರ್ತಿ, ಅಂಬೇಡ್ಕರ್ ಮೂರ್ತಿ, ಬಂಜಾರ ಭವನ, ಐನಾಪುರ ಏತ ನೀರಾವರಿ ಹೀಗೆ ಹಲವಾರು ಕಾಮಗಾರಿಗಳು ಚುನಾವಣೆಗಾಗಿ ಶಾಸಕರು ತಾರಾತುರಿಯಲ್ಲಿ ಅಧರ್ಂಬರ್ಧ ಕೆಲಸಗಳನ್ನು ಉದ್ಘಾಟನೆ ಮಾಡಿದ್ದು ಜನ ನೋಡಿದ್ದಾರೆ.
ಹಿಂದೆಯೂ ತಾವೇ ಶಾಸಕರು, ತಮ್ಮ ತಂದೆ ಸಂಸದರು, ತಮ್ಮದೇ ಅರಣ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿ, ತಮ್ಮ ಬೊಮ್ಮಾಯಿ ಅವರೇ ಮುಖ್ಯಮಂತ್ರಿ, ತಮ್ಮ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ಮಾಡುತ್ತಿತ್ತು ಅವಾಗ ಸಂಭಂದಿಸಿದ ಇಲಾಖೆಗಳ ಅನುಮತಿ ಪಡೆದು ಕಾರ್ಖಾನೆ ಪ್ರಾರಂಭ ಮಾಡಬಹುದಿತ್ತಲ್ಲ ? ಯಾಕೆ ನಿರ್ಲಕ್ಷ್ಯ ಮಾಡಿ ಯತ್ನಾಳ ಅವರನ್ನು ಇವತ್ತು ಇಷ್ಟೊಂದು ಹೈರಾಣ ಮಾಡಿದ್ದು ? ಮೊದಲು ಇದಕ್ಕೆ ಉತ್ತರ ಕೊಡಬೇಕು, ಸುಖ ಸುಮ್ಮನೆ ಬೇರೆ ಅವರ ಕಡೆ ಬೊಟ್ಟು ಮಾಡುವದು ಜವಾಬ್ದಾರಿ ವ್ಯಕ್ತಿಯ ಲಕ್ಷಣವಲ್ಲ.
ಶಾಸಕ ಡಾ. ಅವಿನಾಶ್ ಜಾಧವ ಅವರು ಇಷ್ಟೆಲ್ಲ ತಮ್ಮ ಹುಳುಕುಗಳು ಇದ್ದರು ಸುಮ್ಮನೆ ಕಾಂಗ್ರೆಸ್ ಸರಕಾರದ ಕಡೆ ಬೆರಳು ಮಾಡುತ್ತ ಮತಕ್ಷೇತ್ರದ ರೈತರು ಅಮಾಯಕ ಮತದಾರರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವದು ಖಂಡನೀಯ.
ಎಲ್ಲಕ್ಕೂ ತಾವೇ ಕಾರಣ ಅನ್ನುವ ಸತ್ಯವನ್ನು ಮರೆಮಾಚಿ ಜನರಿಗೆ ಉತ್ತರಿಸುವ ಬದಲು ನುಣುಚಿಕೊಳ್ಳುವ ಜಾಧವ ಕುಟುಂಬದ ನಡೆಯನ್ನು ಜನರು ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತಾರೆ. ಸಿದ್ದಸಿರಿ ಕಾರ್ಖಾನೆ ಮಾಲೀಕರಾದ ಮಾನ್ಯ ಯತ್ನಾಳ ಅವರು ಜಾಧವ ಕುಟುಂಬದ ನಡೆಯನ್ನು ಸೂಕ್ಷ್ಮವಾಗಿ ಅರಿತು ಮುಂದಿನ ದಿನಗಳಲ್ಲಿ ಯಾವ ಪರಿಸ್ತಿಯಲ್ಲೂ ಅವರ ಜಾಧವ ಕುಟುಂಬದ ಮರಳು ಮಾತಿಗೆ ಕಿವಿಗೊಡದೆ ಕಾನೂನಾತ್ಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಕಾರ್ಖಾನೆ ಪ್ರಾರಂಭ ಮಾಡಿ ರೈತರಿಗೆ ಸಹಾಯ ಮಾಡಲು ವಿನಂತಿ.
ಮುಂದೆಯೂ ಇವರ ಮೇಲೆ ವಿಶ್ವಾಸ ಮಾಡಿ ಕೂತರೆ ನಿಮ್ಮ ಕಾರ್ಖಾನೆ ಪ್ರಾರಂಭ ಆಗುವದಿಲ್ಲ, ಇವರು ಇನ್ನು ನಾಲ್ಕು ಚುನಾವಣೆ ತಮ್ಮ ಕಾರ್ಖಾನೆ ಪ್ರಾರಂಭ ಮಾಡುವ ವಿಷವನ್ನೇ ಇಟ್ಟುಕೊಂಡು ಜನರಿಗೆ ಯಾಮರಿಸುವ ಕೆಲಸ ಮಾಡುತ್ತಾರೆ ಇವರ ರಾಜಕೀಯ ದಾಳಕ್ಕೆ ಯತ್ನಾಳ ಅವರು ಹಾಗೂ ಸಿದ್ದಿಸಿರಿ ಕಾರ್ಖಾನೆ ಒಳಗಾಗದಿರಲಿ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.